ಮದಗಜ ಕಾದಾಟ: ಎದುರಾಳಿಯ ದಂತ ಚುಚ್ಚಿ ಆನೆ ಸಾವು - Mahanayaka

ಮದಗಜ ಕಾದಾಟ: ಎದುರಾಳಿಯ ದಂತ ಚುಚ್ಚಿ ಆನೆ ಸಾವು

chamarajanagara
04/10/2023

ಚಾಮರಾಜನಗರ: 35 ವರ್ಷದ ಗಂಡು ಕಾಡಾನೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯ ಓಂಕಾರ ವನ್ಯಜೀವಿ ವಲಯ ವ್ಯಾಪ್ತಿಯ ಕುರುಬರಹುಂಡಿಯ ಆಲದ ಮರದ ಹಳ್ಳ ಅರಣ್ಯ ಪ್ರದೇಶದಲ್ಲಿ ನಡೆದಿದೆ.


Provided by

ಕಾಡಾನೆಯು ಮತ್ತೊಂದು ಕಾಡಾನೆಯ ಜೊತೆ ಕಾದಾಟ ನಡೆಸಿ ಮೃತಪಟ್ಟಿರುವುದಾಗಿ ಅರಣ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ.

ಕಾಡಾನೆಯ ಕಣ್ಣಿನ ಕೆಳಭಾಗದಲ್ಲಿ ಎದುರಾಳಿ ಕಾಡಾನೆಯ ದಂತ ಚುಚ್ಚಿರುವುದು ಕಂಡು ಬಂದಿದ್ದು, ರಕ್ತಸ್ರಾವ ಹಾಗೂ ನಿತ್ರಾಣದಿಂದ ಮೃತಪಟ್ಟಿದೆ. ಎದುರಾಳಿ ಕಾಡಾನೆಯ ದಂತ ಚುಚ್ಚಿ ದಂತವು ಮೃತ ಕಾಡಾನೆಯ ಮೇಲ್ದವಡೆಯವರೆಗೆ 30 ಸೆ.ಮೀ ಆಳದವರೆಗೆ ಹೊಳಹೊಕ್ಕಿದ್ದು, ದವಡೆಯ ಒಳಗೆ ದಂತವು ಮುರಿದಿರುವುದರಿಂದ ಕಾಡಾನೆಯು ಸಾವನ್ನಪ್ಪಿದೆ ಎಂದು ಬಂಡೀಪುರ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್‍ಕುಮಾರ್ ಮಾಹಿತಿ ನೀಡಿದ್ದಾರೆ.


Provided by

ads

ಎದುರಾಳಿ ಆನೆಯ ಮುರಿದ ದಂತದ ಭಾಗ ಹಾಗೂ ಮೃತ ಕಾಡಾನೆಯ ಎರಡು ದಂತಗಳನ್ನು ಇಲಾಖೆಯು ವಶಪಡಿಸಿಕೊಂಡು ಮೃತ ಕಾಡಾನೆಯ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕಳೆಬರವನ್ನು ನಿಯಮಾನುಸಾರ ಅರಣ್ಯ ಪ್ರದೇಶದಲ್ಲೇ ಬಿಡಲಾಗಿದೆ.

ಈ ಸಂದರ್ಭದಲ್ಲಿ ಬಂಡೀಪುರ ಹುಲಿ ಯೋಜನೆ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್ ಕುಮಾರ್, ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ, ಓಂಕಾರ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್ ಕುಮಾರ್, ಇಲಾಖಾ ಪಶುವೈದ್ಯಾಧಿಕಾರಿ ಡಾ.ಮಿರ್ಜಾ ವಾಸಿಂ, ಗಸ್ತು ವನಪಾಲಕ ಸಂತೋಷ್ ಸೇರಿದಂತೆ ಅರಣ್ಯ ವೀಕ್ಷಕ ಹಾಗೂ ಇಲಾಖಾ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಇತ್ತೀಚಿನ ಸುದ್ದಿ