ಮದುವೆಯಿಂದ ಬೇರೆಯಾಗುತ್ತೇವೆಂಬ ಭಯ | ಅವಳಿ ಸಹೋದರಿಯರ ಆತ್ಮಹತ್ಯೆ

deepika divya
04/07/2021

ಮಂಡ್ಯ: ಬೇರೆ ಬೇರೆ ಮನೆಗೆ ಮದುವೆ ಮಾಡಿಕೊಡಲು ಪೋಷಕರು ನಿರ್ಧರಿಸಿದ್ದರಿಂದ ಮನನೊಂದು  ಅವಳಿ ಸಹೋದರಿಯರು ಆತ್ಮಹತ್ಯೆಗೆ ಶರಣಾಗಿರುವ ಘಟನೆ  ಮಂಡ್ಯ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.

ಶ್ರೀರಂಗಪಟ್ಟಣ ತಾಲೂಕಿನ ಹಣಸನಹಳ್ಳಿ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.  ಇಲ್ಲಿನ ಸುರೇಶ್ ಮತ್ತು ಯಶೋಧ ದಂಪತಿಯ ಅವಳಿ ಪುತ್ರಿಯರಾದ 19 ವರ್ಷ ವಯಸ್ಸಿನ ದೀಪಿಕಾ ಮತ್ತು ದಿವ್ಯಾ ಆತ್ಮಹತ್ಯೆಗೆ ಶರಣಾದವರು ಎಂದು ಹೇಳಲಾಗಿದೆ.

ಚಿಕ್ಕವಯಸ್ಸಿನಿಂದಲೂ ಈ ಅವಳಿ ಸಹೋದರಿಯರು  ಅನ್ಯೋನ್ಯತೆಯಿಂದಿದ್ದರು. ಆದರೆ ಮನೆಯವರು ಬೇರೆ ಬೇರೆ ಮನೆಗೆ ಮದುವೆ ಮಾಡಿಕೊಡಲು ನಿರ್ಧರಿಸಿದ್ದು, ಅಗಲಿ ಬದುಕಲಾರದೇ ಸಂಜೆ ಮನೆಯ ಕೊಠಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.  ಘಟನೆ ಸಂಬಂಧ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಬೇರೆ ಬೇರೆ ಮನೆಗೆ ಹೋಗಲು ಪುತ್ರಿಯರಿಗೆ ಇಷ್ಟವಿರಲಿಲ್ಲ ಎನ್ನುವ ವಿಚಾರ ಪೋಷಕರಿಗೆ ಗೊತ್ತಿತ್ತೇ ಎನ್ನುವ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.

ಇತ್ತೀಚಿನ ಸುದ್ದಿ

Exit mobile version