ಮಹಾರಾಷ್ಟ್ರ ಸರ್ಕಾರ ಮರಾಠಾ ಕೋಟಾ ಪರವಾಗಿದೆ: ಏಕನಾಥ್ ಶಿಂಧೆ ಸ್ಪಷ್ಟನೆ

ತೀವ್ರಗೊಳ್ಳುತ್ತಿರುವ ಮರಾಠಾ ಮೀಸಲಾತಿ ಆಂದೋಲನದ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ಕೊನೆಗೊಳ್ಳುತ್ತಿದ್ದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ರಾಜ್ಯ ಸರ್ಕಾರ ಮೀಸಲಾತಿಯ ಪರವಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ನಾಯಕರು ಸಾಮಾಜಿಕ ಕಾರ್ಯಕರ್ತ ಮನೋಜ್ ಜರಂಜ್ ಅವರನ್ನು ಅನಿರ್ದಿಷ್ಟ ಉಪವಾಸವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ನಿರ್ಣಯವನ್ನು ಅಂಗೀಕರಿಸಿದರು.
ಮರಾಠಾ ಸಮುದಾಯಕ್ಕೆ ಕೋಟಾವನ್ನು ಖಚಿತಪಡಿಸಿಕೊಳ್ಳಲು ಸಾಮಾಜಿಕ ಕಾರ್ಯಕರ್ತ ಜರಂಜ್ ಅವರು ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಶಿಂಧೆ ಹೇಳಿದರು.
ಮರಾಠರು ಸಂಯಮವನ್ನು ಪಾಲಿಸಬೇಕು ಎಂದು ಹೇಳಿದ ಅವರು, ಮೀಸಲಾತಿಯನ್ನು ಜಾರಿಗೆ ತರಲು ಕಾನೂನು ವಿಧಾನಗಳಿಗೆ ಸರ್ಕಾರಕ್ಕೆ ಸಮಯ ಬೇಕು ಎಂದು ಹೇಳಿದರು.
ಇನ್ನು ಈ ನಿರ್ಣಯಕ್ಕೆ ಸಿಎಂ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಎನ್ಸಿಪಿ ಅಧ್ಯಕ್ಷ ಶರದ್ ಪವಾರ್, ಶಿವಸೇನೆ (ಯುಬಿಟಿ) ಮುಖಂಡ ಅನಿಲ್ ಪರಬ್, ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ವಾಡೆಟ್ಟಿವಾರ್, ವಿಧಾನ ಪರಿಷತ್ತಿನ ಎಲ್ಒಪಿ ಅಂಬಾದಾಸ್ ದಾನ್ವೆ ಸಹಿ ಹಾಕಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ರಾಜ್ಯದ ಅನೇಕ ಭಾಗಗಳಲ್ಲಿ ಹಿಂಸಾಚಾರದ ಘಟನೆಗಳು ನಡೆದಿವೆ. ಮರಾಠಾವಾಡಾದ ಐದು ಜಿಲ್ಲೆಗಳಲ್ಲಿ ಸರ್ಕಾರಿ ಬಸ್ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು, ಬೀಡ್ ನ ಕೆಲವು ಭಾಗಗಳಲ್ಲಿ ಸೋಮವಾರ ಕರ್ಫ್ಯೂ ಮತ್ತು ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ.