ಬೈಕ್ ನಲ್ಲಿ ಬಂದು ಮಹಿಳೆಯರನ್ನು ಅಸಭ್ಯವಾಗಿ ಸ್ಪರ್ಶಿಸಿ ಪರಾರಿಯಾಗುತ್ತಿದ್ದ ಆರೋಪಿಯ ಬಂಧನ
ಬೆಂಗಳೂರು: ಬೈಕ್ ನಲ್ಲಿ ಬಂದು ಮಹಿಳೆಯರ ಅಂಗಾಂಗ ಸ್ಪರ್ಶಿಸಿ ಕಿರುಕುಳ ನೀಡಿ ಪರಾರಿಯಾಗುತ್ತಿದ್ದ ಆರೋಪಿಯೋರ್ವನನ್ನು ಬೆಂಗಳೂರು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆಜಿಎಫ್ ರಾಬರ್ಟ್ ಪೇಟೆಯ ಅರುಣ್ ಕುಮಾರ್ ಎಂಬಾತ ಬಂಧಿತ ಆರೋಪಿ ಎಂದು ಗುರುತಿಸಲಾಗಿದ್ದು, ಈತ ರಾತ್ರಿ ವೇಳೆ ಬೈಕ್ ನಲ್ಲಿ ಅಡ್ಡಾಡುತ್ತಿದ್ದು, ಮಹಿಳೆಯರ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಹೇಳಲಾಗಿದೆ.
ಸಾಕಷ್ಟು ಬಾರಿ ಮಹಿಳೆಯರು ಹಾಗೂ ಯುವತಿಯರನ್ನು ಟಾರ್ಗೆಟ್ ಮಾಡಿ ಅವರ ಮೈಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿ ಪರಾರಿಯಾಗುತ್ತಿದ್ದ ಎಂದು ಹೇಳಲಾಗಿದೆ. ಆದರೆ, ಈ ಬಾರಿ ಉತ್ತರ ಭಾರತ ಮೂಲದ ಯುವತಿಯೊಂದಿಗೆ ಇದೇ ವರ್ತನೆ ತೋರಿದ್ದಾನೆ. ಈ ಸಂದರ್ಭದಲ್ಲಿ ಆರೋಪಿಯ ಸುಳಿವು ಪೊಲೀಸರಿಗೆ ಲಭಿಸಿದೆ.
ಮೇ 31ರಂದು ಕೋರಮಂಗಲದಲ್ಲಿ ಉತ್ತರ ಭಾರತ ಮೂಲದ ಯುವತಿಯೊಂದಿಗೆ ಈತ ಅಸಭ್ಯವಾಗಿ ವರ್ತಿಸಿದ್ದ. ಈ ವೇಳೆ ಯುವತಿ ತಕ್ಷಣವೇ ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ದೂರು ನೀಡಿದ್ದಳು.
ದೂರನ್ನು ಕೈಗೆತ್ತಿಕೊಂಡ ಪೊಲೀಸರು, ಸಿಸಿ ಟಿವಿ ಕ್ಯಾಮರಾದ ದೃಶ್ಯವನ್ನು ಪರಿಶೀಲಿಸಿದ್ದಾರೆ. ಜೊತೆಗೆ ಬೈಕ್ ನಂಬರ್ ನ್ನು ಪರಿಶೀಲಿಸಿ ಆರೋಪಿ ಅರುಣ್ ಕುಮಾರ್ ಎಂಬಾತನನ್ನು ಬಂಧಿಸಿದ್ದು, ಇದೀಗ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದು, ವಿಚಾರಣೆಯ ಬಳಿಕ ಇನ್ನುಷ್ಟು ವಿಚಾರಗಳು ತಿಳಿದು ಬರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.