ಪತ್ನಿಯ ತಾಯಿ ಮತ್ತು ಸಹೋದರನನ್ನು ಕೊಂದೇಬಿಟ್ಟ: ಕೊನೆಗೆ ಮನೆಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಆರೋಪಿ
ಪತ್ನಿಯನ್ನು ವಾಪಸ್ ಮನೆಗೆ ಕಳುಹಿಸಲು ನಿರಾಕರಿಸಿದ ಅತ್ತೆ ಮತ್ತು ಸೋದರ ಮಾವನನ್ನು ಕೊಂದು ವ್ಯಕ್ತಿಯೋರ್ವ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಬೆನೋಡಾ ಗ್ರಾಮದಲ್ಲಿ ನಡೆದಿದೆ.
ಇಬ್ಬರ ಹತ್ಯೆಯ ನಂತರ ಆರೋಪಿ ಆಶಿಶ್ ಠಾಕ್ರೆ ತನ್ನ ಮನೆಗೆ ಬೆಂಕಿ ಹಚ್ಚಿ ಸ್ವತಃ ಒಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಗೆ ಬೆಂಕಿ ಬಿದ್ದದ್ದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆ ಸ್ಥಳಕ್ಕೆ ಧಾವಿಸಿತು. ಅಗ್ನಿಶಾಮಕ ಅಧಿಕಾರಿಗಳು ಬೆಂಕಿಯನ್ನು ನಂದಿಸುವ ವೇಳೆಗೆ ಮನೆಯ ಒಳಗೆ ಮೂರು ಸುಟ್ಟ ಶವಗಳು ಪತ್ತೆಯಾಗಿದೆ.
ಈ ಮೂರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ವ್ಯಕ್ತಿಯ ಸೋದರ ಮಾವ ಮತ್ತು ಅತ್ತೆಯ ಕೊಲೆಯು ಕೌಟುಂಬಿಕ ವಿವಾದದಿಂದ ಆಗಿದೆ ಎಂದು ತಿಳಿದುಬಂದಿದೆ.
ಆರೋಪಿ ಠಾಕ್ರೆ ಕೆಲವು ತಿಂಗಳ ಹಿಂದೆ ತಮ್ಮ ಲತಾ ಭೋಂಡೆ ಎಂಬಾಕೆಯನ್ನು ಮದ್ವೆ ಆಗಿದ್ದ. ಆದರೆ ಈತನ ಅತಿಯಾದ ಮದ್ಯ ಸೇವನೆ ಮತ್ತು ಕೌಟುಂಬಿಕ ಹಿಂಸೆಯ ಹಿನ್ನೆಲೆಯಲ್ಲಿ ಆಕೆ ಈತನನ್ನು ತೊರೆದಿದ್ದಳು.
ಠಾಕ್ರೆ ತನ್ನ ಹೆಂಡತಿಯನ್ನು ತನ್ನ ಬಳಿಗೆ ಬರುವಂತೆ ಪದೇ ಪದೇ ಒತ್ತಾಯಿಸಿದ್ದ. ಆದರೆ ಆತನ ಹೆಂಡತಿಯ ಕುಟುಂಬವು ಆತನ ಮಾತನ್ನು ನಿರ್ಲಕ್ಷ್ಯ ಮಾಡಿತ್ತು.
ಪತ್ನಿಯನ್ನು ವಾಪಸ್ ಕಳುಹಿಸುವಂತೆ ಠಾಕ್ರೆ ತನ್ನ ಸೋದರ ಮಾವನಿಗೆ ಬೆದರಿಕೆ ಹಾಕಿದಾಗ ಪರಿಸ್ಥಿತಿ ಉಲ್ಬಣಿಸಿತು. ತಡರಾತ್ರಿ ಸ್ನೇಹಿತನ ಬೈಕಿನಲ್ಲಿ ಹರಿತವಾದ ಆಯುಧದೊಂದಿಗೆ ಅತ್ತೆ-ಮಾವನ ಮನೆಗೆ ಬಂದು ಅತ್ತೆ ಮತ್ತು ಸೋದರ ಮಾವನನ್ನು ಕೊಂದಿದ್ದಾನೆ.