ಮನವಿ ಸಲ್ಲಿಸೋ ವೇಳೆ ನಡಿತು ಹೈಡ್ರಾಮಾ: ಮಹಾರಾಷ್ಟ್ರ ಸಚಿವರ ಮೇಲೆ ಅರಿಶಿನ ಪುಡಿ ಎರಚಿದ ವ್ಯಕ್ತಿ
ಮಹಾರಾಷ್ಟ್ರ ಸರ್ಕಾರದ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಅವರ ಮೇಲೆ ಅರಿಶಿನ ಪುಡಿ ಎರಚಿದ ಹಿನ್ನೆಲೆಯಲ್ಲಿ ಇಬ್ಬರನ್ನು ಮಹಾರಾಷ್ಟ್ರದ ಸೋಲಾಪುರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯ ವೀಡಿಯೋ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಸೋಲಾಪುರದ ಸರ್ಕ್ಯೂಟ್ ಹೌಸ್ನಲ್ಲಿ ಈ ಘಟನೆ ನಡೆದಿದೆ. ಧಂಗರ್ ಸಮುದಾಯಕ್ಕೆ ಮೀಸಲಾತಿ ನೀಡುವ ತಮ್ಮ ಬೇಡಿಕೆಗೆ ಸಂಬಂಧಿಸಿದ ಪತ್ರವನ್ನು ಸಲ್ಲಿಸಲು ‘ಧಂಗರ್ ಆರ್ಕ್ಷಣ್ ಸಂಘರ್ಷ ಸಮಿತಿಯ’ ಕೆಲವು ಸದಸ್ಯರು ಸಭೆ ಸೇರಿದ್ದರು. ಇದೇ ವೇಳೆ ಸಚಿವರು ಮನವಿಯನ್ನು ಸ್ವೀಕರಿಸಲು ಮುಂದೆ ಬಂದಾಗ, ಶೇಖರ್ ಬಂಗ್ಲೆ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಸಚಿವರ ಮೇಲೆ ಅರಿಶಿನ ಪುಡಿಯನ್ನು ಎಸೆದಿದ್ದಾರೆ. ನಂತರ ಸಚಿವರ ಜೊತೆಗಿದ್ದವರು ಅವರನ್ನು ಥಳಿಸಿದ್ದಾರೆ.
ನಂತರ ಸರ್ಕ್ಯೂಟ್ ಹೌಸ್ ನಲ್ಲಿದ್ದ ಪೊಲೀಸ್ ಸಿಬ್ಬಂದಿ ಶೇಖರ್ ಬಂಗ್ಲೆ ಅವರನ್ನು ವಶಕ್ಕೆ ತೆಗೆದುಕೊಂಡರು. ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶೇಖರ್ ಬಂಗ್ಲೆ, ಧಂಗರ್ ಸಮುದಾಯದ ಮೀಸಲಾತಿ ಬೇಡಿಕೆಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕಾಗಿದೆ ಎಂದು ಹೇಳಿದರು.
ನಂತರ ಈ ಘಟನೆಯ ಬಗ್ಗೆ ಮಾತನಾಡಿದ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್, ‘ಶುದ್ಧವೆಂದು ಪರಿಗಣಿಸಲಾದ ‘ಭಂಡಾರ (ಅರಿಶಿನ ಹುಡಿ)’ ನನ್ನ ಮೇಲೆ ಎಸೆಯಲ್ಪಟ್ಟಿರುವುದು ನನಗೆ ಸಂತೋಷವಾಗಿದೆ. ಇದನ್ನು ಸಾಂಕೇತಿಕ ಕ್ರಿಯೆಯಾಗಿ ಅಥವಾ ಭಾವನೆಗಳನ್ನು ವ್ಯಕ್ತಪಡಿಸಲು ಮಾಡಿದ್ದರೆ, ಅದರಲ್ಲಿ ನನಗೆ ಯಾವುದೇ ಬೇಸರ ಇಲ್ಲ” ಎಂದು ಅವರು ಹೇಳಿದ್ದಾರೆ.