ಮಣಿಪುರದಲ್ಲಿ ವಿಧಾನಸಭೆ ಅಧಿವೇಶನವನ್ನು ಮುಂದೂಡಿ: ಅಹಿತಕರ ಘಟನೆ ನಡೆದ್ರೆ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದ ಬುಡಕಟ್ಟು ಸಂಘಟನೆಗಳು
ಜನಾಂಗೀಯ ಹಿಂಸಾಚಾರ ಪೀಡಿತ ರಾಜ್ಯ ಮಣಿಪುರವು ಸಹಜ ಸ್ಥಿತಿಗೆ ಮರಳುವವರೆಗೆ ಆಗಸ್ಟ್ 29ಕ್ಕೆ ನಿಗದಿಯಾಗಿರುವ ವಿಧಾನಸಭೆ ಅಧಿವೇಶನವನ್ನು ಮುಂದೂಡುವಂತೆ ಮಣಿಪುರದ ಎರಡು ಬುಡಕಟ್ಟು ಸಂಘಟನೆಗಳು ಆಗ್ರಹಿಸಿವೆ.
ಬುಡಕಟ್ಟು ಏಕತೆ ಸಮಿತಿ ಮತ್ತು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆಯು ಆಗಸ್ಟ್ 29 ರಂದು ವಿಧಾನಸಭೆ ಅಧಿವೇಶನ ಕರೆದಿರುವುದನ್ನು ಖಂಡಿಸಿವೆ. ಪ್ರಸ್ತುತ ಪರಿಸ್ಥಿತಿಯು ಕುಕಿ-ಜೋನ 10 ಶಾಸಕರು ಅಧಿವೇಶನಕ್ಕೆ ಹಾಜರಾಗಲು ಅನುಕೂಲಕರವಾಗಿಲ್ಲ ಎಂದು ಹೇಳಿವೆ.
ಅಲ್ಪಸಂಖ್ಯಾತ ಬುಡಕಟ್ಟು ಜನರ ಭಾವನೆಗಳನ್ನು ಪರಿಗಣಿಸದೆ ಅಧಿವೇಶನ ನಡೆಸಲು ಸರ್ಕಾರ ನಿರ್ಧರಿಸಿದ್ರೆ ಅದರಿಂದ ಉಂಟಾಗುವ ಯಾವುದೇ ಅಹಿತಕರ ಘಟನೆಗೆ ರಾಜ್ಯ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಸಂಘಟನೆಗಳು ಎಚ್ಚರಿಸಿವೆ.
‘2023 ರ ಮೇ 3 ರಿಂದ ಆರಂಭವಾದ ಜನಾಂಗೀಯ ಹಿಂಸಾಚಾರ ಇಂಫಾಲ್ ಕಣಿವೆಯ ನೂರಕ್ಕೂ ಹೆಚ್ಚು ಮುಗ್ಧ ಕುಕಿ-ಜೋ ಜನರ ಹತ್ಯೆಗೆ ಸಾಕ್ಷಿಯಾಗಿದೆ. ನೂರಾರು ಚರ್ಚ್ಗಳು ಮತ್ತು ಕ್ವಾಟರ್ಸ್ ಗಳು ಸೇರಿದಂತೆ ಸಾವಿರಾರು ಮನೆಗಳನ್ನು ನಾಶಪಡಿಸಲಾಗಿದೆ. ಸಚಿವರು ಮತ್ತು ಶಾಸಕರ ಪ್ರಾಣ ಮತ್ತು ಆಸ್ತಿಯನ್ನು ಸಹ ಹಾನಿ ಮಾಡಲಾಗಿದೆ ಎಂದು ಸಂಘಟನೆಗಳು ಜಂಟಿ ಪ್ರಕಟಣೆಯಲ್ಲಿ ತಿಳಿಸಿವೆ.