ಖುಲಾಯಿಸಿದ ಅದೃಷ್ಟ: ಮಿಜೋರಾಂನ ಹೊಸ ಸಿಎಂ ಆಗಲಿದ್ದಾರೆ ಇಂದಿರಾ ಗಾಂಧಿಯವರ ಭದ್ರತಾ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದ ಲಾಲ್ದುಹೋಮ - Mahanayaka
4:17 AM Wednesday 5 - February 2025

ಖುಲಾಯಿಸಿದ ಅದೃಷ್ಟ: ಮಿಜೋರಾಂನ ಹೊಸ ಸಿಎಂ ಆಗಲಿದ್ದಾರೆ ಇಂದಿರಾ ಗಾಂಧಿಯವರ ಭದ್ರತಾ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದ ಲಾಲ್ದುಹೋಮ

04/12/2023

ಮಿಜೋರಾಂ ಪೀಪಲ್ಸ್ ಮೂವ್ ಮೆಂಟ್ ಮಿಜೋರಾಂನಲ್ಲಿ ಇದೇ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದೆ. ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಐಪಿಎಸ್ ಅಧಿಕಾರಿ ಲಾಲ್ದುಹೋಮ ಅವರು ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ.

73 ವರ್ಷ ವಯಸ್ಸಿನ ಲಾಲ್ದುಹೋಮ ಅವರು ಐಪಿಎಸ್ ಅಧಿಕಾರಿಯಾಗಿದ್ದಾಗ ಇಂದಿರಾ ಗಾಂಧಿಯವರ ಭದ್ರತಾ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದರು.
ಇಂದಿರಾ ಗಾಂಧಿಯವರ ಪ್ರಭಾವದಿಂದ ರಾಜಕಾರಣಕ್ಕೆ ಸೇರಿದ ಲಾಲ್ದುಹೋಮ ಅವರು ಕಾಂಗ್ರೆಸ್‌ಗೆ ಸೇರಲು ತಮ್ಮ ಕೆಲಸವನ್ನು ತೊರೆದಿದ್ದರು. ಬಳಿಕ 1984 ರಲ್ಲಿ ಮಿಜೋರಾಂನ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು.

MNF ನಾಯಕ ಲಾಲ್ಡೆಂಗಾ ನೇತೃತ್ವದ ಮಿಜೋ ಬಂಡಾಯ ಪಡೆ 1986 ರಲ್ಲಿ ಮಿಜೋ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಲಾಲ್ದುಹೋಮಾ ಕಾಂಗ್ರೆಸ್ ತೊರೆದು MNF ಗೆ ಸೇರಿಕೊಂಡರು.

ಆದರೆ, ಲಾಲ್ದುಹೋಮ ಅವರು MNF ಪಕ್ಷವನ್ನೂ ತೊರೆದು 2018 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಜೋರಾಮ್ ನ್ಯಾಶನಲಿಸ್ಟ್ ಪಾರ್ಟಿ ಅನ್ನು ರಚಿಸಿದರು.
ಆದರೆ ಪಕ್ಷವು ಚುನಾವಣಾ ಆಯೋಗದ ಮಾನ್ಯತೆಯನ್ನು ಪಡೆಯದ ಕಾರಣ ಲಾಲ್ದುಹೋಮ ಸೇರಿದಂತೆ ZPM ಅಭ್ಯರ್ಥಿಗಳು ಸ್ವತಂತ್ರ ಅಭ್ಯರ್ಥಿಗಳಾಗಿ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಯಿತು. ಈ ಚುನಾವಣೆಯಲ್ಲಿ ZPM ಅಭ್ಯರ್ಥಿಗಳು ಏಳು ಸ್ಥಾನಗಳಲ್ಲಿ ಜಯಗಳಿಸಿದ್ದರು.

ಲಾಲ್ದುಹೋಮ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾಯಿತರಾಗಿದ್ದರೂ ZPM ಅಧ್ಯಕ್ಷರಾಗಿದ್ದರಿಂದ ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಅವರನ್ನು ಅನರ್ಹಗೊಳಿಸಲಾಯಿತು. 2021ರಲ್ಲಿ ನಡೆದ ಉಪಚುನಾವಣೆಯಲ್ಲಿ ಲಾಲ್ದುಹೋಮ ಅವರು ವಿಧಾನಸಭೆಗೆ ಮರು ಆಯ್ಕೆಯಾಗಿದ್ದರು. ಇದೀಗ ಅವರಿಗೆ ಅದೃಷ್ಟ ಖುಲಾಯಿಸಿದೆ.

ಇತ್ತೀಚಿನ ಸುದ್ದಿ