ಮಸೀದಿ, ಮನೆ ಧ್ವಂಸ ಪ್ರಕರಣ: ಮಹಾರಾಷ್ಟ್ರ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡ ಕೋರ್ಟ್ - Mahanayaka
2:19 AM Monday 16 - September 2024

ಮಸೀದಿ, ಮನೆ ಧ್ವಂಸ ಪ್ರಕರಣ: ಮಹಾರಾಷ್ಟ್ರ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡ ಕೋರ್ಟ್

20/07/2024

ಮಹಾರಾಷ್ಟ್ರದ ವಿಶಾಲಗಡ ಕೋಟೆಯಲ್ಲಿ ಜು.14ರಂದು ಮನೆಗಳು,ಅಂಗಡಿಗಳು ಮತ್ತು ಮಸೀದಿಯನ್ನು ಧ್ವಂಸಗೊಳಿಸಿದ್ದ ಘಟನೆ ನಡೆದಿತ್ತು. ಇದಕ್ಕಾಗಿ ಮಹಾರಾಷ್ಟ್ರ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡಿರುವ ಬಾಂಬೆ ಉಚ್ಚ ನ್ಯಾಯಾಲಯ, ಮಳೆಗಾಲದಲ್ಲಿ ಮನೆಗಳನ್ನು ನೆಲಸಮಗೊಳಿಸುವುದನ್ನು ಪ್ರಶ್ನಿಸಿದೆ. ರಾಜ್ಯದಲ್ಲಿ ಕಾನೂನೇ ಇಲ್ಲದಂತಾಗಿದೆ ಎಂದು ಎಚ್ಚರಿಸಿದೆ. ಜು.14ರಂದು ವಿಶಾಲಗಡ ಕೋಟೆಯಲ್ಲಿ ಭುಗಿಲೆದ್ದಿದ್ದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ಮಾಜಿ ಬಿಜೆಪಿ ಸಂಸದ ಸಂಭಾಜಿರಾಜೇ ಛತ್ರಪತಿ ಮತ್ತು ಅವರ ಬೆಂಬಲಿಗರು ಪ್ರದೇಶದಲ್ಲಿ ನಡೆದಿದೆಯೆನ್ನಲಾದ ಅತಿಕ್ರಮಣಗಳ ವಿರುದ್ಧ ಕೋಟೆಗೆ ಪ್ರತಿಭಟನಾ ಜಾಥಾ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಕೋಟೆಯ ಸುತ್ತುಮುತ್ತಲಿನ ಮನೆಗಳು,ಅಂಗಡಿಗಳು ಮತ್ತು ಮಸೀದಿಯನ್ನು ಧ್ವಂಸಗೊಳಿಸಿದ್ದರು.

ಯಾವುದೇ ಮನೆಯನ್ನು ಕೆಡವಿದರೆ ಅದಕ್ಕೆ ಕಾರಣರಾದ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲು ನ್ಯಾಯಾಲಯವು ಹಿಂಜರಿಯುವುದಿಲ್ಲ ಎಂದು ಬರ್ಗಸ್ ಕೊಲಾಬಾವಾಲಾ ಮತ್ತು ಫಿರ್ದೋಷ್ ಪೂನಿವಾಲಾ ರ ಪೀಠ ಹೇಳಿತು.
‘ಚಲೋ ವಿಶಾಲಗಡ’ ಜಾಥಾದ ಬಳಿಕ ನಡೆದಿದ್ದ ಹಿಂಸಾಚಾರದ ವೀಡಿಯೊಗಳನ್ನು ವೀಕ್ಷಿಸಿದ ನ್ಯಾಯಾಲಯವು ತನ್ನ ಮುಂದೆ ಹಾಜರಾಗುವಂತೆ ವಿಶಾಲಗಡ ಪೋಲಿಸರಿಗೆ ನಿರ್ದೇಶನ ನೀಡಿತು.

‘ಕಾನೂನು ಮತ್ತು ಸುವ್ಯವಸ್ಥೆ ಎಲ್ಲಿದೆ? ಇವರು ನಿಮ್ಮ ಅಧಿಕಾರಿಗಳಲ್ಲ ಅಲ್ಲವೇ? ಹಾಗಾದರೆ ಈ ವ್ಯಕ್ತಿಗಳು ಯಾರು? ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿ ನಿಮ್ಮದಲ್ಲವೇ? ಈ ವಿಷಯದಲ್ಲಿ ಯಾವುದೇ ಎಫ್‌ಐಆರ್ ದಾಖಲಾಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ನಾವು ಬಯಸಿದ್ದೇವೆ ’ ಎಂದು ವೀಡಿಯೊಗಳನ್ನು ಉಲ್ಲೇಖಿಸಿ ಪ್ರಶ್ನಿಸಿದ ಪೀಠವು, ‘ಮುಂದಿನ ಆದೇಶದವರೆಗೆ ಯಾವುದೇ ಕಟ್ಟಡವನ್ನು,ಅದು ಅಂಗಡಿ ಅಥವಾ ಮನೆಯಾಗಿರಲಿ,ಕೆಡವಬಾರದು ಎಂದು ನಾವು ಸ್ಪಷ್ಟವಾಗಿ ಹೇಳುತ್ತಿದ್ದೇವೆ. ಯಾವುದೇ ನೆಲಸಮ ಕಾರ್ಯಾಚರಣೆ ನಡೆದರೆ ನಿಮ್ಮ ಅಧಿಕಾರಿಗಳ ವಿರುದ್ಧ ತೀವ್ರ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ’ ಎಂದು ಎಚ್ಚರಿಕೆ ನೀಡಿತು.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ