ಕರಂಬಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಗೀತ ತರಬೇತಿ ಆರಂಭ
ಬಜಪೆ: ಶಾಲಾ ಮಕ್ಕಳು ಪಠ್ಯದೊಂದಿಗೆ ಸಂಗೀತವನ್ನೂ ಕಲಿಯಲು ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕರಂಬಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಗೀತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಮುಂದಿನ ವರ್ಷದಲ್ಲಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವ ಗುರಿಯೊಂದಿಗೆ, ಸಂಗೀತ ತರಬೇತಿ ಕಾರ್ಯಾಗಾರವನ್ನು ಎಸ್ ಡಿಎಂಸಿ ವತಿಯಿಂದ ನಡೆಸಲು ತೀರ್ಮಾನಿಸಲಾಗಿತ್ತು. ಅಂತೆಯೇ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಾಘವೇಂದ್ರ ಅವರ ಉಸ್ತುವಾರಿಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ದೇವಾಡಿಗ ಅವರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಸಂಗೀತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.
ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದ ಶಾಲಾ ನಾಯಕಿ, ಎಸ್ ಡಿಎಂಸಿ ಅಧ್ಯಕ್ಷರಾದ ರಾಘವೇಂದ್ರ, ಸಂಗೀತ, ಶಿಕ್ಷಕರಾದ ಸುದೇಶ್ ಹೊಸಬೆಟ್ಟು, ಶಾಲಾ ಮುಖ್ಯ ಶಿಕ್ಷಕರಾದ ಉಷಾ ಕಿರಣ್, ಎಸ್ ಡಿಎಂಸಿ ಸದಸ್ಯರಾದ ಪ್ರಮೀಳಾ, ಪ್ರವೀಣ್ ಆಚಾರ್ಯ, ಮಾಧವ ಅಮೀನ್, ಪೂವಪ್ಪ ಸಾಲ್ಯಾನ್, ಸ್ಥಳೀಯ ದಾನಿ ಮಂಜುಳಾ, ಹಿರಿಯ ಶಿಕ್ಷಕಿ ಗೀತಾ, ಉಷಾ ಕುಮಾರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕುಮಾರಿ ಲಲಿತಾ ಅವರನ್ನು ಬೀಳ್ಕೊಡಲಾಯಿತು. ಉಷಾ ಕಿರಣ್ ಸ್ವಾಗತಿಸಿ, ಮಾಲಾ ಶ್ರೀ ಕಾರ್ಯಕ್ರಮ ನಿರೂಪಿಸಿದರು. ನವೀನ ಕುಮಾರಿ ವಂದಿಸಿದರು.