ಮುಸ್ಲಿಮ್ ಯುವಕರಿಂದ ಹಿಂದೂ ವೃದ್ಧನ ಅಂತ್ಯಸಂಸ್ಕಾರ! - Mahanayaka
3:06 AM Friday 20 - September 2024

ಮುಸ್ಲಿಮ್ ಯುವಕರಿಂದ ಹಿಂದೂ ವೃದ್ಧನ ಅಂತ್ಯಸಂಸ್ಕಾರ!

anthyasamskara
27/04/2021

ಕೊಪ್ಪಳ: ಹಿಂದೂ ಧರ್ಮದ ಹಿರಿಯ ನಾಗರಿಕರೊಬ್ಬರು ಮೃತಪಟ್ಟಿದ್ದು, ಅವರ ಅಂತ್ಯಸಂಸ್ಕಾರವನ್ನು ಮುಸ್ಲಿಮ್ ಯುವಕರೇ ಮುಂದೆ ನಿಂತು ನಡೆಸಿದ ಸೌಹಾರ್ದಯುತ ಘಟನೆ ಕೊಪ್ಪಳದ ಗವಿಮಠದ ಸ್ಮಶಾನದಲ್ಲಿ ನಡೆದಿದೆ.

ಶ್ರೇಷ್ಠತೆಗಳು, ಕನಿಷ್ಠತೆಗಳು ಮನುಷ್ಯನ ಮನಸ್ಸಿನಲ್ಲಿರುತ್ತದೆ. ಆದರೆ ಒಂದು ಸಾವು ಸಂಭವಿಸಿದಾಗ ಎಲ್ಲರೂ ಒಂದೇ ಎನ್ನುವ ಸತ್ಯ ಪ್ರತಿಯೊಬ್ಬರಿಗೂ ಅರಿವಿಗೆ ಬರುತ್ತದೆ. ಈ ಪ್ರಕೃತಿಯ ಮಡಿಲಲ್ಲಿ ಎಲ್ಲರೂ ಒಂದೇ ಎನ್ನುವ ಸತ್ಯ ಸಾವಿನಿಂದ ಮಾತ್ರ ಮನುಷ್ಯನ ಅರಿವಿಗೆ ಬರುತ್ತದೆ. ಇಂತಹದೊಂದು ಘಟನೆಗೆ ಸಾಕ್ಷಿಯಾಗಿರುವುದು ಕೊಪ್ಪಳದ ಹ್ಯುಮೆನೆಟೇರಿಯನ್‌ ರಿಲೀಫ್‌ ಸೊಸೈಟಿ ಸದಸ್ಯರು.

ಇಲ್ಲಿನ ವಿಕಾಸ ನಗರದ ನಿವಾಸಿ 85 ವರ್ಷ ವಯಸ್ಸಿನ ವಿಠ್ಠಲರಾವ್‌ ಮಹೇಂದ್ರಕರ್‌ ಅವರು ತೀವ್ರ ಉಸಿರಾಟದ ಸಮಸ್ಯೆಯಿಂದ ಭಾನುವಾರ ಸಂಜೆ ಸಾವನ್ನಪ್ಪಿದ್ದರು. ಇವರ ಸಂಬಂಧಿಕರು ಬೇರೆ ಬೇರೆ ಊರಿನಲ್ಲಿದ್ದರು. ಇವರ ಮಗ ಜೊತೆಗಿದ್ದರೂ ತಂದೆಯ ಸಾವಿನ ಸುದ್ದಿ ಕೇಳಿ ಅವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರು.


Provided by

ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ವಿಠ್ಠಲರಾವ್‌ ಮಹೇಂದ್ರಕರ್‌ ಅವರ ಅಂತ್ಯಸಂಸ್ಕಾರಕ್ಕೆ ಹ್ಯುಮೆನೆಟೇರಿಯನ್‌ ರಿಲೀಫ್‌ ಸೊಸೈಟಿಯ ಮುಸ್ಲಿಮ್ ಯುವಕರು ಸಜ್ಜಾದರು. ಗವಿಮಠದ ಹಿಂಭಾಗದಲ್ಲಿರುವ  ಹಿಂದೂ ರುದ್ರಭೂಮಿಯಲ್ಲಿ ವೃದ್ಧನ ಅಂತ್ಯಸಂಸ್ಕಾರಕ್ಕೆ ಹಿಂದೂ ಧರ್ಮದ ಪದ್ಧತಿಯಂತೆಯೇ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದು, ಮೃತರ ಅಳಿಯನ ಮೂಲಕ ಧರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿ ಅಂತ್ಯಕ್ರಿಯೆಯನ್ನು ನಡೆಸಲಾಗಿದೆ.

ಇತ್ತೀಚಿನ ಸುದ್ದಿ