ಪಿವಿ.ನರಸಿಂಹ ರಾವ್ ಕೋಮುವಾದಿಯಾಗಿದ್ದರು: ಇವರೇ ಬಿಜೆಪಿಯ ಮೊದಲ ಪ್ರಧಾನಿ ಎಂದ ಕಾಂಗ್ರೆಸ್ ನ ಮಣಿಶಂಕರ್ ಅಯ್ಯರ್

ಮಾಜಿ ಪ್ರಧಾನಿಯಾಗಿದ್ದ ಕಾಂಗ್ರೆಸ್ ನ ಪಿವಿ ನರಸಿಂಹ ರಾವ್ ಅವರನ್ನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ಅವರು ‘ಕೋಮುವಾದಿ’ ಎಂದು ಕರೆದಿದ್ದಾರೆ. ಭಾರತವನ್ನು ಹಿಂದೂ ರಾಷ್ಟ್ರ ಎನ್ನುತ್ತಿದ್ದ ರಾವ್ ಅವರು ಬಿಜೆಪಿಯ ಮೊದಲ ಪ್ರಧಾನಿ. ವಾಜಪೇಯಿ ಅಲ್ಲ ಎಂದು ಅವರು ಟೀಕಿಸಿದ್ದಾರೆ.
ತಮ್ಮ ಆತ್ಮಚರಿತ್ರೆ “ಮೆಮೊಯಿರ್ಸ್ ಆಫ್ ಎ ಮೇವರಿಕ್ – ದಿ ಫಸ್ಟ್ ಫಿಫ್ಟಿ ಇಯರ್ಸ್ (1941-1991)” ನ ಔಪಚಾರಿಕ ಬಿಡುಗಡೆ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ವೀರ್ ಸಾಂಘ್ವಿ ಜೊತೆ ನಡೆಸಿದ ಸಂವಾದದಲ್ಲಿ ಹಲವು ಆಸಕ್ತಿಕರ ವಿಷಯಗಳನ್ನು ಅಯ್ಯರ್ ಹಂಚಿಕೊಂಡಿದ್ದಾರೆ.
ಪಿ ವಿ ನರಸಿಂಹ ರಾವ್ ಕೋಮುವಾದಿಯಾಗಿದ್ದರು. ಅವರು ಹಿಂದೂತ್ವ ಪರ ಇದ್ದರು ಎಂದು ಅಯ್ಯರ್ ಆರೋಪಿಸಿದ್ದಾರೆ.
ನರಸಿಂಹ ರಾವ್ ಜೊತೆಗೆ ತಾವು ನಡೆಸಿದ ಸಂಭಾಷಣೆಯನ್ನು ಉಲ್ಲೇಖಿಸಿದ ಅಯ್ಯರ್, ‘ನರಸಿಂಹರಾವ್ ಅವರು ನನ್ನ ಜಾತ್ಯತೀತತೆಯ ವ್ಯಾಖ್ಯಾನವನ್ನು ಒಪ್ಪುತ್ತಿರಲಿಲ್ಲ’ ಎಂದಿದ್ದಾರೆ.
ಜಾತ್ಯತೀತತೆಯ ಬಗ್ಗೆ ನನ್ನ ವ್ಯಾಖ್ಯಾನದಲ್ಲಿ ಏನು ತಪ್ಪಾಗಿದೆ ಎಂದು ನಾನು ಕೇಳಿದ್ದಕ್ಕೆ ಅವರು, ʼಮಣಿ ನಿಮಗೆ ಇದು ಹಿಂದೂ ದೇಶ ಎಂದು ಅರ್ಥವಾಗುತ್ತಿಲ್ಲʼ ಎಂದು ಹೇಳಿದ್ದರು. ‘ಇದನ್ನೇ ಬಿಜೆಪಿ ಕೂಡಾ ಹೇಳುತ್ತದೆ’ ಎಂದು ನಾನು ಉತ್ತರಿಸಿದೆ ಎಂದು ಅಯ್ಯರ್ ತಿಳಿಸಿದ್ದಾರೆ.