‘ನಾನು ಬದುಕಿರುವವರೆಗೂ ಸ್ನೇಹ ಮತ್ತು ಸಂಬಂಧ ಉಳಿಯುತ್ತದೆ’ ಎಂದ ನಿತೀಶ್ ಕುಮಾರ್: ಬಿಜೆಪಿಯನ್ನು ಹೊಗಳಿದ್ರಾ ಬಿಹಾರ ಸಿಎಂ..?; ಕೋಲಾಹಲ ಸೃಷ್ಟಿಸಿದ ನಿತೀಶ್ ಹೇಳಿಕೆ
ಕಾರ್ಯಕ್ರಮವೊಂದರಲ್ಲಿ ಬಿಜೆಪಿ ನಾಯಕರನ್ನು ಉಲ್ಲೇಖಿಸಿ ಮಾತನಾಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, “ನಾನು ಬದುಕಿರುವವರೆಗೂ ಸ್ನೇಹ ಮತ್ತು ಸಂಬಂಧ ಉಳಿಯುತ್ತದೆ” ಎಂದು ಹೇಳಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ನಿತೀಶ್ ಅವರು ಹೊಗಳಿದ ಅಪರೂಪದ ಪ್ರಶಂಸೆಯು ರಾಜಕೀಯ ಕೋಲಾಹಲವನ್ನು ಸೃಷ್ಟಿಸಿದೆ.
”ಇಲ್ಲಿ ನಾವೆಲ್ಲರೂ ಸ್ನೇಹಿತರು. ನಾವು ಬೇರೆ, ನೀವು ಬೇರೆ. ಇದರರ್ಥ ನಮ್ಮ ಸ್ನೇಹ ಕೊನೆಗೊಳ್ಳುತ್ತದೆಯೇ..? ನಾನು ಬದುಕಿರುವವರೆಗೂ ನೀವು ನನ್ನೊಂದಿಗೆ ಸಂಪರ್ಕದಲ್ಲಿರುತ್ತೀರಿ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ” ಎಂದು ಪಾಟ್ನಾದ ಮೋತಿಹರಿಯ ಮಹಾತ್ಮ ಗಾಂಧಿ ಕೇಂದ್ರೀಯ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ನಿತೀಶ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಜೆಡಿಯು ಮುಖ್ಯಸ್ಥರು ಈ ಹೇಳಿಕೆ ನೀಡಿದಾಗ ಅಧ್ಯಕ್ಷ ದ್ರೌಪದಿ ಮುರ್ಮು, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಮತ್ತು ಬಿಜೆಪಿ ಸಂಸದ ರಾಧಾ ಮೋಹನ್ ಸಿಂಗ್ ವೇದಿಕೆಯಲ್ಲಿದ್ದರು.
ಬಿಜೆಪಿಯನ್ನು ಎದುರಿಸಲು ಎನ್ ಡಿಎ ಮೈತ್ರಿಕೂಟದಲ್ಲಿ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಅಭಿಯಾನದ ನೇತೃತ್ವ ವಹಿಸಿದ್ದ ನಿತೀಶ್ ಕುಮಾರ್, ಮೋತಿಹರಿಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದಕ್ಕೆ ಕೇಂದ್ರ ಸರ್ಕಾರವನ್ನು ಶ್ಲಾಘಿಸಿದರು. ಅಲ್ಲದೇ ಮಿತ್ರ ಪಕ್ಷವಾಗಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ತನ್ನ ಪ್ರಸ್ತಾಪದ ಮೇಲೆ ಕಾರ್ಯನಿರ್ವಹಿಸಲಿಲ್ಲ ಎಂದು ದೂಷಿಸಿದರು. 2014 ರಲ್ಲಿ ಎನ್ ಡಿಎ ಅಧಿಕಾರಕ್ಕೆ ಬಂದ ನಂತರವೇ ಪರಿಸ್ಥಿತಿ ಬದಲಾಯಿತು ಎಂದು ಹೇಳಿದರು.
ಕಳೆದ ವರ್ಷ ಬಿಜೆಪಿಯನ್ನು ತೊರೆದು ಲಾಲು ಪ್ರಸಾದ್ ಅವರ ಆರ್ ಜೆಡಿ ಮತ್ತು ಕಾಂಗ್ರೆಸ್ ನೊಂದಿಗೆ ಕೈಜೋಡಿಸಿದ ನಿತೀಶ್ ಕುಮಾರ್ ಅವರೊಂದಿಗೆ ಪಕ್ಷಕ್ಕೆ ವೈಯಕ್ತಿಕ ದ್ವೇಷವಿಲ್ಲ ಎಂದು ಬಿಹಾರ ಘಟಕದ ಮುಖ್ಯಸ್ಥ ಸಾಮ್ರಾಟ್ ಚೌಧರಿ ಹೇಳುವುದರೊಂದಿಗೆ ಬಿಜೆಪಿ ಕೂಡ ತನ್ನ ನಿಲುವನ್ನು ಮೃದುಗೊಳಿಸಿದೆ. ಆದಾಗ್ಯೂ, ಕುಮಾರ್ ಅವರ ತುಷ್ಟೀಕರಣದ ರಾಜಕೀಯವನ್ನು ಬಿಜೆಪಿ ವಿರೋಧಿಸುವುದನ್ನು ಮುಂದುವರಿಸುತ್ತದೆ ಎಂದು ಅವರು ಹೇಳಿದ್ದರು.