ಮನೆ ಇಲ್ಲದೇ ಮದುವೆಗೆ ಹೆಣ್ಣು ಕೊಡ್ತಿಲ್ಲ: ಜನತಾ ದರ್ಶನದಲ್ಲಿ ಪರಿಹಾರಕ್ಕಾಗಿ ಆಕ್ರೋಶ - Mahanayaka
7:24 AM Thursday 19 - September 2024

ಮನೆ ಇಲ್ಲದೇ ಮದುವೆಗೆ ಹೆಣ್ಣು ಕೊಡ್ತಿಲ್ಲ: ಜನತಾ ದರ್ಶನದಲ್ಲಿ ಪರಿಹಾರಕ್ಕಾಗಿ ಆಕ್ರೋಶ

janatha darshana
26/09/2023

ಚಾಮರಾಜನಗರ: ಇಂದು ಚಾಮರಾಜನಗರ‌ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಭವನದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಜನತಾ ದರ್ಶನ ನಡೆಯಿತು.

280ಕ್ಕಿಂತಲೂ ಹೆಚ್ಚಿನ ಮಂದಿ ಸಚಿವರಿಗೆ ಅಹವಾಲು ಸಲ್ಲಿಸಿ ಅಧಿಕಾರಿಗಳ ವಿರುದ್ಧ ದೂರುಗಳ ಸುರಿಮಳೆಗೈದರು.  ಈ ವೇಳೆ, ರಸ್ತೆ ಅಗಲೀಕರಣಕ್ಕಾಗಿ ಸ್ಥಳ ಕೊಟ್ಟು 6 ವರ್ಷಗಳಾದರೂ ಪರಿಹಾರ ಸಿಗದಿದ್ದಕ್ಕೆ ನಾಸಿರ್ ಎಂಬವರು ತೀವ್ರ ಅಸಮಧಾನ ಹೊರಹಾಕಿದರು.


Provided by

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ವೇಳೆ ಮನೆ ಒಡೆದು ಹಾಕಿದ್ದೀರಿ– ಆದರೆ 6 ವರ್ಷಗಳಾದರೂ ಪರಿಹಾರ ಸಿಕ್ಕಿಲ್ಲ, ಹಣ ಇಲ್ಲದೇ ಮನೆ ಕಟ್ಟಿಕೊಳ್ಳಲಾಗುತ್ತಿಲ್ಲ.  ನನಗೆ 40 ವರ್ಷ ಆಗಿದೆ ಯಾರು ನನಗೆ ಹೆಣ್ಣು ಕೊಡುತ್ತಿಲ್ಲ, ಎಲ್ಲಿ ಹೋದರೂ ಮನೆ ಕೇಳುತ್ತಾರೆ, ಮದುವೆಯಾದ ಮೇಲೆ ಹೆಂಡತಿಯನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿಯಾ ಅನ್ನುತ್ತಾರೆ ಎಂದು ಅಳಲು ತೋಡಿಕೊಂಡರು. ಪರಿಹಾರ ನೀಡಲಾಗದಿದ್ದರೇ‌ ದಯಾ ಮರಣ ಕೊಡಿ ಎಂದು ಆಕ್ರೋಶ ಹೊರಹಾಕಿದ್ದಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ ಪ್ರಕರಣ ಕೋರ್ಟ್ ಲ್ಲಿ ಇರುವುದರಿಂದ ಸಮಸ್ಯೆ ಉಂಟಾಗಿದೆ ಎಂದರು.

ತಿಂಗಳಿಗೆ 2 ರೂ. ಸಂಬಳ:  ಮುಜರಾಯಿ ಇಲಾಖೆ ವ್ಯಾಪ್ತಿಗೆ  ಒಳಪಟ್ಟ ರಾಮಸಮುದ್ರದದ ಹರಳುಕೋಟೆ ಜನಾರ್ದನ ದೇಗುಲ ಅರ್ಚಕ ಅನಂತ ಪ್ರಸಾದ್ ಮನವಿ ಸಲ್ಲಿಸಿ, ತನಗೇ ಈಗಲು ತಿಂಗಳಿಗೆ 2 ರೂ. ವೇತನ ಕೊಡಲಾಗುತ್ತಿದೆ, ಸರ್ಕಾರ ಕೊಡುವ ಹಣ ಅಗರಬತ್ತಿಗೂ ಸಾಲುತ್ತಿಲ್ಲ ಎಂದರು.‌ಇದಕ್ಕೆ, ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ಡಿಸಿಗೆ ಸೂಚಿಸಿದರು.

ರೈತ ಸಂಘಟನೆಯ ಸದಸ್ಯರು ಮನವಿ ಸಲ್ಲಿಸಿ ನಿತ್ಯ 7 ಗಂಟೆ ಸಮರ್ಪಕ ವಿದ್ಯುತ್ ನೀಡಬೇಕು, ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಎಂದು ಘೋಷಣೆ ಮಾಡಬೇಕು, ರೈತರ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು. ಸಚಿವ ಕೆ.ವೆಂಕಟೇಶ್ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದರು.

280 ಕ್ಕೂ ಹೆಚ್ಚು ಮಂದಿ ಇಂದು ಮನವಿಗಳು ಸಲ್ಲಿಸಿದರು, ಅಧಿಕಾರಿಗಳು ಕೇವಲ ಬಾಯಿ ಮಾತಿನಲ್ಲಿ ಕ್ರಮ ವಹಿಸುತ್ತೇನೆ, ಪರಿಶೀಲಿಸುತ್ತೇನೆ ಎನ್ನುವುದು ಬಿಟ್ಟು ಮುಂದಿನ ತಿಂಗಳೊಳಗೆ ಎಲ್ಲವಕ್ಕೂ ಪರಿಹಾರ ಸಿಗಬೇಕೆಂದು ಸೂಚಿಸಿದರು.

ಇತ್ತೀಚಿನ ಸುದ್ದಿ