ಪತಿ ಹಾಗೂ ಪತಿಯ ಸಂಬಂಧಿಕರಿಂದ ಕಿರುಕುಳ: ನೊಂದ ಮಹಿಳೆಯಿಂದ ದುಡುಕಿನ ನಿರ್ಧಾರ
23/02/2021
ರಾಯಚೂರು: ಪತಿ ಹಾಗೂ ಸಂಬಂಧಿಕರು ಕಿರುಕುಳ ನೀಡಿದ್ದರಿಂದ ಬೇಸತ್ತ ಮಹಿಳೆಯೊಬ್ಬರು ತಮ್ಮ 1 ವರ್ಷದ ಮಗುವಿನ ಜೊತೆಗೆ ಮನೆ ತೊರೆದು ಹೋಗಿದ್ದು, ಬಳಿಕ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ.
26 ವರ್ಷದ ಹನುಮಂತಿ ಹುಲಗಯ್ಯ (26) ಹಾಗೂ ಇವರ ಉದಯ 14 ತಿಂಗಳ ಮಗು ಕುಟುಂಬಸ್ಥರ ಕಿರುಕುಳಕ್ಕೆ ಬಲಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಶುಕ್ರವಾರ ಮಗು ಜೊತೆ ಹನುಮಂತಿ ಅವರು ಮನೆಯಿಂದ ಹೊರ ಹೋದವರು ನಾಪತ್ತೆಯಾಗಿದ್ದರು.
ರಾಯಚೂರು ತಾಲ್ಲೂಕಿನ ಮಟಮಾರಿ ಗ್ರಾಮದ ಹನುವಂತಿ, ಹುಲಗಯ್ಯ ಎಂಬಾತನನ್ನು ಏಳು ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಇದೀಗ ಪತಿ ಹುಲಗಯ್ಯ ಹಾಗೂ ಆತನ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದು, ಇದರಿಂದಾಗಿ ಹನುಮಂತಿ ಬಹಳಷ್ಟು ನೊಂದಿದ್ದರು.
ಮಗುವಿನೊಂದಿಗೆ ಮನೆಯಿಂದ ಹೊರ ಹೋಗಿದ್ದ ಹನುಮಂತಿ ಮಾನ್ವಿ ತಾಲ್ಲೂಕಿನ ಅರೋಲಿ ಗ್ರಾಮದ ಬಾವಿಯೊಂದಕ್ಕೆ ತನ್ನ ಮಗುವಿನೊಂದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.