ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ ಮಗ: ಪುತ್ರನ ಹೆಸರಿನಲ್ಲೇ ದೇವಸ್ಥಾನ ಕಟ್ಟಿದ ತಂದೆ ತಾಯಿ..!
ಆತ ಆ ಹೆತ್ತವರ ಮುದ್ದಿನ ಮಗನಾಗಿದ್ದ. ಆದರೆ ವಿಧಿಯಾಟ ಬಲ್ಲವರು ಯಾರು..? ಆ ಮುದ್ದಿನ ಮಗ ಅವರೆಲ್ಲರನ್ನು ಬಿಟ್ಟು ಇಹಲೋಕ ತ್ಯಜಿಸಿದ. ಮಗ ಬಾಹ್ಯವಾಗಿ ಇಲ್ಲದಿದ್ದರೇನಂತೆ, ಆತನ ನೆನಪು ಇಹಲೋಕದಲ್ಲಿ ಸದಾ ಇರಬೇಕೆಂದು ನಿರ್ಧಾರ ಮಾಡಿದ ಆ ಹೆತ್ತವರು ಮಾಡಿದ್ದೇನು ಗೊತ್ತಾ..?
ಯೆಸ್. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದ ಮಗನಿಗಾಗಿ ತಂದೆ ತಾಯಿ ದೇವಸ್ಥಾನವನ್ನೇ ಕಟ್ಟಿದ್ದಾರೆ. ಅನಂತಪುರ ಜಿಲ್ಲೆಯ ಪಾಮಿಡಿ ಪಟ್ಟಣದ ಆದಿನಾರಾಯಣ ಮತ್ತು ನಾಗಲಕ್ಷ್ಮಿ ಇಬ್ಬರೂ ನಿವೃತ್ತ ನೌಕರರು. ಇವರಿಗೆ ಗಂಗಾಧರ ಎಂಬ ಓರ್ವನೇ ಮಗನಿದ್ದ. ಆದರೆ ಕೆಲವು ವರ್ಷಗಳ ಹಿಂದೆ ಗಂಗಾಧರ್ ಅನಾರೋಗ್ಯದಿಂದ ಸಾವನ್ನಪ್ಪಿದ್ದ.
ಮಗನ ಸಾವನ್ನು ಅರಗಿಸಿಕೊಳ್ಳಲಾಗದೇ ಆದಿನಾರಾಯಣ ಮತ್ತು ನಾಗಲಕ್ಷ್ಮಿ ತಮ್ಮ ಮಗ ಸತ್ತರೂ ಜೊತೆಯಲ್ಲಿದ್ದಾನೆ ಎಂದು ಭಾವಿಸಿಕೊಳ್ಳಲು ನಿರ್ಧರಿಸಿದರು. ಪಾಮಿಡಿ ಪೇಟೆಯಲ್ಲಿರುವ ತಮ್ಮ ಮನೆಯಲ್ಲಿ ಗಂಗಾಧರನಿಗೆ ದೇವಸ್ಥಾನ ಕಟ್ಟಿದರು. ತಮ್ಮ ಮೃತ ಮಗನ ವಿಗ್ರಹವನ್ನು ತೆನಾಲಿಯಲ್ಲಿ ಹತ್ತು ಲಕ್ಷ ರೂ. ವೆಚ್ಚದಲ್ಲಿ ವಿಶೇಷವಾಗಿ ತಯಾರಿಸಿದ್ದಾರೆ. ಅವರು ಪ್ರತಿದಿನ ವಿಗ್ರಹಕ್ಕೆ ಬಟ್ಟೆಗಳನ್ನು ಬದಲಾಯಿಸುತ್ತಾರೆ. ಅಲ್ಲದೇ ಈ ದಂಪತಿ ತಮ್ಮ ಪುತ್ರ ಗಂಗಾಧರ್ ಹೆಸರಿನಲ್ಲಿ ಹಲವು ಸೇವಾ ಕಾರ್ಯಕ್ರಮಗಳನ್ನು ಮಾಡಿ ಮಗನ ಸಾವಿನ ನೋವನ್ನು ಮರೆಯುತ್ತಿದ್ದಾರೆ. ಮಮತೆಗೆ ಎಲ್ಲೆ ಉಂಟೇ..?