ಪ್ರವೀಣ್ ಕುಮಾರ್ ನನ್ನು ಜೈಲಿನಿಂದ ಬಿಡುಗಡೆ ಮಾಡಬಾರದು: ಪತ್ನಿ ಕುಟುಂಬಸ್ಥರಿಂದ ಮನವಿ - Mahanayaka
7:04 PM Friday 20 - September 2024

ಪ್ರವೀಣ್ ಕುಮಾರ್ ನನ್ನು ಜೈಲಿನಿಂದ ಬಿಡುಗಡೆ ಮಾಡಬಾರದು: ಪತ್ನಿ ಕುಟುಂಬಸ್ಥರಿಂದ ಮನವಿ

praveen kumar
09/08/2022

ಮಂಗಳೂರು: ಸ್ವಾತಂತ್ರ್ಯೋತ್ಸವದ ಅಮೃತೋತ್ಸವ ಹಿನ್ನೆಲೆ ಸನ್ನಡತೆಯ ಆಧಾರದಲ್ಲಿ ವಾಮಂಜೂರು ಕೊಲೆ ಪ್ರಕರಣ ಅಪರಾಧಿ ಉಪ್ಪಿನಂಗಡಿ ಸಮೀಪದ ಪೆರಿಯಡ್ಕದ ಪ್ರವೀಣ್ ಕುಮಾರ್‌ನನ್ನು ಯಾವ ಕಾರಣಕ್ಕೂ ಜೈಲಿನಿಂದ ಬಿಡುಗಡೆ ಮಾಡಬಾರದು ಎಂದು ಸ್ವತಃ ಪತ್ನಿ ಸೇರಿದಂತೆ ಕುಟುಂಬಸ್ಥರು ಮಂಗಳೂರು ನಗರದ ಪೊಲೀಸ್ ಕಮಿಷನರ್ ಗೆ ಮನವಿ ಸಲ್ಲಿಸಿದ್ದಾರೆ.

ನಾನು ಹೊರಗೆ ಬಂದ್ರೆ ಇನ್ನೂ ನಾಲ್ಕು ಜನ್ರರನ್ನ ಕೊಲೆ ಮಾಡ್ತೇನೆ ಎಂದು ಈಗಾಗಲೇ ಹೇಳಿದ್ದರಿಂದ ಆತನನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದೆಂದು ಅಪರಾಧಿ ಪ್ರವೀಣ್‌ ಕುಮಾರ್‌ ಪತ್ನಿ, ಸಹೋದರ ಮತ್ತು ಕೊಲೆಯಾದ ಅಪ್ಪಿ ಶೇರಿಗಾರ್ತಿಯ ಪುತ್ರ ಸೀತಾರಾಮ ಸಹಿತ 30 ಮಂದಿಯ ತಂಡ ಇಂದು ಮಂಗಳೂರು ನಗರ ಪೊಲೀಸ್ ಕಮಿಷನರ್‌ ಕಚೇರಿಗೆ ಆಗಮಿಸಿ ಮನವಿ ಮಾಡಿ ಒತ್ತಾಯಿಸಿದರು.

1994ರ ಫೆಬ್ರವರಿ 23ರ ಮಧ್ಯರಾತ್ರಿ ವಾಮಂಜೂರಿನಲ್ಲಿದ್ದ ತನ್ನ ಸೋದರತ್ತೆ ಅಪ್ಪಿ ಶೇರಿಗಾರ್ತಿ, ಅವರ ಪುತ್ರ ಗೋವಿಂದ ಮತ್ತು ಸೋದರತ್ತೆಯ ಪುತ್ರಿ ಶಕುಂತಳಾ ಹಾಗೂ ಶಕುಂತಾಳರ ಪುತ್ರಿ ದೀಪಿಕಾಳನ್ನು ಕೊಲೆ ಮಾಡಿದ್ದ ಆರೋಪವು ಸಾಬೀತಾಗಿತ್ತು.


Provided by

ನ್ಯಾಯಾಲಯವು ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಬಳಿಕ ಪ್ರವೀಣ್ ಕುಮಾರ್ ಸಲ್ಲಿಸಿದ ಮೇಲ್ಮನವಿಯ ಮೇರೆಗೆ ಗಲ್ಲು ಶಿಕ್ಷೆಯು ಜೀವಾವಧಿ ಶಿಕ್ಷೆಗೆ ಪರಿವರ್ತನೆಗೊಂಡಿತ್ತು.

ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಪ್ರವೀಣ್ ಕುಮಾರ್ ಇದ್ದಾನೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭ ಸನ್ನಡತೆಯ ಆಧಾರದಲ್ಲಿ ಈತನನ್ನು ಜೈಲಿನಿಂದ ಬಿಡುಗಡೆಗೆ ಸರಕಾರ ಮುಂದಾಗಿದೆ. ಅಲ್ಲದೇ ಸಂತ್ರಸ್ತರ ಹಾಗೂ ಪ್ರವೀಣ್‌ ನ ಮನೆಯವರ ಹೇಳಿಕೆ ದಾಖಲಿಸುವಂತೆ ಸರಕಾರ ಪೊಲೀಸ್ ಇಲಾಖೆಗೆ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸರು ಪ್ರವೀಣ್ ಕುಮಾರ್‌ ನ ಸಂಬಂಧಿ ಹಾಗೂ ಅಪ್ಪಿ ಶೇರಿಗಾರ್ತಿಯ ಪುತ್ರ ಸೀತಾರಾಮ್, ಪ್ರವೀಣ್‌ ನ ಪತ್ನಿ ಅನಸೂಯ ಪ್ರವೀಣ್ ಸಹೋದರ ಪ್ರದೀಪ್‌  ಹೇಳಿಕೆ ನೀಡಿದ್ದಾರೆ.

ಪ್ರವೀಣ್‌ ಕುಮಾರ್ ಬಿಡುಗಡೆಯಾಗಿ ಬಂದರೆ ಮುಂದಿನ ದಿನಗಳಲ್ಲಿ ಮತ್ತೆ ಆತ ಕೊಲೆ ಮಾಡುವ ಸಾಧ್ಯತೆ ಇದ್ದು, ಆತನನ್ನು ಬಿಡುಗಡೆ ಮಾಡಬಾರದು ಎಂದು ಪತ್ನಿ ಕಮಿಷನರ್ ಅವರಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಮಂಗಳೂರು ನಗರದ ಪೊಲೀಸ್ ಕಮಿನಷರ್‌ ಶಶಿಕುಮಾರ್, ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎನ್ನುವ ಮಾಹಿತಿ ತಿಳಿದು ಕುಟುಂಬಿಕರು ಇಲ್ಲಿ ಬಂದು ಬಿಡುಗಡೆ ಮಾಡಬಾರದು ಎಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ಘಟನೆ ನಡೆದಿರುವ ಗ್ರಾಮಾಂತರ ಎಸ್ಪಿ ಅವರಲ್ಲಿ ಮಾಹಿತಿ ಕಲೆ ಹಾಕುತ್ತೇನೆ. ಈ ವಿಚಾರದಲ್ಲಿ ಏನು ಮಾಡಬೇಕೆಂದು ನಿರ್ಧರಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮನೆ ಮಂದಿಗೆ ಭರವಸೆ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ