ಪ್ರಧಾನಿ ನರೇಂದ್ರ ಮೋದಿಯಿಂದ ಗುಜರಾತ್ ವಂತಾರದಲ್ಲಿ ವನ್ಯಜೀವಿ ಪುನವರ್ಸತಿ ಸಂರಕ್ಷಣಾ ಕೇಂದ್ರ ಉದ್ಘಾಟನೆ

ಜಾಮ್ ನಗರ (ಗುಜರಾತ್): ಗುಜರಾತ್ನ ಜಾಮ್ ನಗರದಲ್ಲಿರುವ ವಂತಾರ ವನ್ಯಜೀವಿ ರಕ್ಷಣೆ, ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರವನ್ನು ಪ್ರಧಾನಿ ನರೇಂದ್ರ ಮೋದಿ(Prime Minister Narendra Modi ) ಮಂಗಳವಾರದಂದು (ಮಾರ್ಚ್ 4) ಉದ್ಘಾಟಿಸಿದರು.
ವಂತಾರ(Vantar)ದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪ್ರಭೇದಗಳಿಗೆ ನೆಲೆ ಒದಗಿಸಲಾಗಿದೆ. ಮತ್ತು ಒಂದೂವರೆ ಲಕ್ಷಕ್ಕೂ ಹೆಚ್ಚು ರಕ್ಷಣೆ ಮಾಡಲಾದ, ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿರುವ ಪ್ರಾಣಿಗಳಿಗೆ ನೆಲೆಯಾಗಿದೆ. ವಂತಾರದಲ್ಲಿ ಇರುವಂಥ ವಿವಿಧ ಸೌಲಭ್ಯಗಳ ಬಗ್ಗೆ ಪ್ರಧಾನಿ ಮೋದಿ ಮಾಹಿತಿ ಪಡೆದರು. ಇನ್ನು ಪುನರ್ವಸತಿ ಒದಗಿಸಲಾದ ವಿವಿಧ ಪ್ರಭೇದದ ಪ್ರಾಣಿಗಳೊಂದಿಗೆ ಅವರು ಸಮಯವನ್ನು ಕಳೆದರು.
ವಂತಾರದಲ್ಲಿ ಇರುವ ವನ್ಯಜೀವಿ ಆಸ್ಪತ್ರೆಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು, ಎಂಆರ್ ಐ, ಸಿಟಿ ಸ್ಕ್ಯಾನ್ ಗಳು, ಐಸಿಯುಗಳು ಸೇರಿದಂತೆ ಪಶುವೈದ್ಯಕೀಯ ಸೌಲಭ್ಯಗಳನ್ನು ವೀಕ್ಷಿಸಿದರು. ವನ್ಯಜೀವಿ ಅರಿವಳಿಕೆ, ಹೃದಯಶಾಸ್ತ್ರ, ಮೂತ್ರಪಿಂಡಶಾಸ್ತ್ರ, ಎಂಡೋಸ್ಕೋಪಿ, ದಂತವೈದ್ಯಶಾಸ್ತ್ರ, ಆಂತರಿಕ ಔಷಧ ಇತ್ಯಾದಿಗಳನ್ನು ಹೊಂದಿರುವ ವಿವಿಧ ವಿಭಾಗಗಳಿಗೆ ಸಹ ಭೇಟಿ ನೀಡಿದರು. ಇಲ್ಲಿ ಅವರು ಏಷ್ಯಾಟಿಕ್ ಸಿಂಹದ ಮರಿಗಳು, ಬಿಳಿ ಸಿಂಹದ ಮರಿ, ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದದ ಹಿಮಾಲಯದ ಚಿರತೆ ಮರಿ, ಕ್ಯಾರಕಲ್ಸ್ (ವಿಶಿಷ್ಟ ಬಗೆಯ ಕಾಡು ಬೆಕ್ಕು) ಸೇರಿದಂತೆ ವಿವಿಧ ಪ್ರಭೇದದ ಪ್ರಾಣಿಗಳಿಗೆ ಆಹಾರ ನೀಡಿದರು, ಸಂತಸದ ಕ್ಷಣಗಳನ್ನು ಕಳೆದರು.
ಇನ್ನು ಪ್ರಧಾನಿ ಮೋದಿ ಅವರು ಆಹಾರ ನೀಡಿದಂಥ ಬಿಳಿ ಸಿಂಹದ ಮರಿಯು ವಂತಾರದಲ್ಲಿಯೇ ಜನಿಸಿದಂಥದ್ದು. ಅದರ ತಾಯಿಯನ್ನು ರಕ್ಷಿಸಿ, ಆರೈಕೆಗಾಗಿ ವಂತಾರಕ್ಕೆ ಕರೆತಂದ ನಂತರದಲ್ಲಿ ಬಿಳಿ ಸಿಂಹದ ಮರಿಯು ಜನಿಸಿತು. ಭಾರತದಲ್ಲಿ ಹಿಂದೊಮ್ಮೆ ಹೇರಳವಾಗಿದ್ದ ಕ್ಯಾರಕಲ್ ಗಳು ಈಗ ಕಂಡುಬರುವುದು ಅಪರೂಪವಾಗುತ್ತಿವೆ. ವಂತಾರದಲ್ಲಿ ಕ್ಯಾರಕಲ್ಗಳ ಸಂರಕ್ಷಣೆಗಾಗಿ ಸೆರೆಯಲ್ಲಿ ಸಂತಾನೋತ್ಪತ್ತಿ ಕಾರ್ಯಕ್ರಮದಡಿ ಸಾಕಲಾಗುತ್ತದೆ ಮತ್ತು ನಂತರ ಕಾಡಿಗೆ ಬಿಡಲಾಗುತ್ತದೆ.
ನರೇಂದ್ರ ಮೋದಿ ಅವರು ಆಸ್ಪತ್ರೆಯ ಎಂಆರ್ಐ ಕೋಣೆಗೆ ಭೇಟಿ ನೀಡಿದರು ಮತ್ತು ಏಷಿಯಾಟಿಕ್ ಸಿಂಹಕ್ಕೆ ಎಂಆರ್ಐ ಮಾಡುವುದನ್ನು ವೀಕ್ಷಿಸಿದರು. ಹೆದ್ದಾರಿಯಲ್ಲಿ ಕಾರಿಗೆ ಡಿಕ್ಕಿ ಹೊಡೆದ ನಂತರ, ಅದನ್ನು ರಕ್ಷಣೆ ಮಾಡಿ ಜೀವ ಉಳಿಸುವುದಕ್ಕಾಗಿ ಶಸ್ತ್ರಚಿಕಿತ್ಸೆ ಮಾಡಲಾದ ಚಿರತೆಯ ಆಪರೇಷನ್ ಥಿಯೇಟರ್ಗೆ ಭೇಟಿ ನೀಡಿದರು.
ವಂತಾರದಲ್ಲಿ ರಕ್ಷಿಸಲಾದ ಪ್ರಾಣಿಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನವನ್ನೇ ಬಹುತೇಕ ಪ್ರತಿಬಿಂಬಿಸುವ ಸ್ಥಳಗಳಲ್ಲಿ ಇರಿಸಲಾಗಿದೆ. ಇಲ್ಲಿ ಕೈಗೊಂಡ ಕೆಲವು ಪ್ರಮುಖ ಸಂರಕ್ಷಣಾ ಉಪಕ್ರಮಗಳಲ್ಲಿ ಏಷಿಯಾಟಿಕ್ ಸಿಂಹ, ಹಿಮ ಚಿರತೆ, ಒಂದು ಕೊಂಬಿನ ಘೇಂಡಾಮೃಗ ಇತರವು ಸೇರಿಕೊಂಡಿವೆ.
ನರೇಂದ್ರ ಮೋದಿ ಅವರು ವಿವಿಧ ಉಗ್ರ ಸ್ವರೂಪದ- ಸ್ವಭಾವದ ಪ್ರಾಣಿಗಳೊಂದಿಗೆ ಸಮಯ ಕಳೆದರು. ಅದರಲ್ಲೂ ಗೋಲ್ಡನ್ ಟೈಗರ್ನೊಂದಿಗೆ ಮುಖಾಮುಖಿಯಾಗಿ ಕುಳಿತರು. ಒಂದೇ ತಾಯಿಯ ಮರಿಗಳಾದ 4 ಹಿಮ ಹುಲಿಗಳು ಇಲ್ಲಿ ಇದ್ದು, ಅವುಗಳನ್ನು ಸರ್ಕಸ್ನಿಂದ ರಕ್ಷಿಸಲಾಗಿದೆ. ಅಲ್ಲಿ ಅವುಗಳು ವಿವಿದ ಪ್ರದರ್ಶನಗಳನ್ನು ನೀಡುತ್ತಿದ್ದವು, ಜತೆಗೆ ಬಿಳಿ ಸಿಂಹ ಮತ್ತು ಹಿಮ ಚಿರತೆಗಳಿದ್ದವು.
ಅಪರೂಪದ ಒಕಾಪಿಯ ಮೈ ದಡವಿದ ನರೇಂದ್ರ ಮೋದಿ ಅವರು, ಚಿಂಪಾಂಜಿಗಳಿಗೆ ಎದುರಾದರು. ಸಾಕುಪ್ರಾಣಿಗಳಾಗಿ ಇರಿಸಲಾಗಿದ್ದ ಒಂದ ಕಡೆಯಿಂದ ವಂತಾರಕ್ಕೆ ಅವುಗಳನ್ನು ತರಲಾಗಿದೆ. ಇನ್ನು ಒರಾಂಗುಟನ್ಗಳೊಂದಿಗೆ ಅಪ್ಪಿಕೊಂಡರು ಮತ್ತು ಪ್ರೀತಿಯಿಂದ ಆಟವಾಡಿದರು. ನೀರಿನ ಅಡಿಯಲ್ಲಿರುವ ನೀರಾನೆಯನ್ನು, ಮೊಸಳೆಗಳನ್ನು ನೋಡಿದರು. ಜೀಬ್ರಾಗಳ ನಡುವೆ ನಡೆದಾಡಿದರು. ಜಿರಾಫೆ ಮತ್ತು ಘೇಂಡಾಮೃಗದ ಮರಿಗಳಿಗೆ ಆಹಾರ ನೀಡಿದರು. ಇನ್ನು ಒಂದು ಕೊಂಬಿನ ಘೇಂಡಾಮೃಗದ ಮರಿಯೊಂದು ಅನಾಥವಾಗಿದ್ದು, ಅದರ ತಾಯಿಯು ವಂತಾರದಲ್ಲಿಯೇ ಸಾವನ್ನಪ್ಪಿತು.
ದೊಡ್ಡ ಹೆಬ್ಬಾವು, ವಿಶಿಷ್ಟವಾದ ಎರಡು ತಲೆಯ ಹಾವು, ಎರಡು ತಲೆಯ ಆಮೆ, ಟ್ಯಾಪಿರ್ ನೋಡಿದರು. ಇನ್ನು ಚಿರತೆ ಮರಿಗಳನ್ನು ಕೃಷಿ ಜಮೀನಿನಲ್ಲಿ ಬಿಡಲಾಗಿತ್ತು. ಆ ನಂತರ ಗ್ರಾಮಸ್ಥರು ಅವುಗಳನ್ನು ಗುರುತಿಸಿ ರಕ್ಷಿಸಿದರು. ದೈತ್ಯ ನೀರುನಾಯಿ, ಬೊಂಗೊ (ಹುಲ್ಲೆ), ಸೀಲುಗಳು ಸಹ ನೋಡಿದ ನಂತರದಲ್ಲಿ ಸ್ನಾನ ಮಾಡುತ್ತಾ ಆಟವಾಡುತ್ತಿದ್ದ ಆನೆಗಳನ್ನು ಸಹ ನರೇಂದ್ರ ಮೋದಿ ವೀಕ್ಷಿಸಿದರು.
ಅಂದ ಹಾಗೆ ಈ ಹೈಡ್ರೋಥೆರಪಿ ಕೊಳಗಳು ವಿಶಿಷ್ಟವಾದವು. ಇವುಗಳಿಂದ ಸಂಧಿವಾತ ಮತ್ತು ಕಾಲು ಸಮಸ್ಯೆಗಳಿಂದ ಬಳಲುತ್ತಿರುವ ಆನೆಗಳ ಚೇತರಿಕೆಗೆ ಸಹಾಯ ಮಾಡುತ್ತವೆ ಮತ್ತು ಅವುಗಳ ಚಲನಶೀಲತೆಯನ್ನು ಸುಧಾರಿಸುತ್ತವೆ.
ಆನೆ ಆಸ್ಪತ್ರೆಯ ಕಾರ್ಯನಿರ್ವಹಣೆಯನ್ನು ಅವರು ನೋಡಿದರು. ಅಂದ ಹಾಗೆ ಇದು ಇಂಥದ್ದರ ಪೈಕಿ ವಿಶ್ವದ ಅತಿದೊಡ್ಡ ಆಸ್ಪತ್ರೆಯಾಗಿದೆ. ವಂತಾರದಲ್ಲಿ ರಕ್ಷಿಸಲಾದ ಗಿಳಿಗಳನ್ನು ಅವರು ಬಿಡುಗಡೆ ಮಾಡಿದರು. ವಂತಾರದಲ್ಲಿ ವಿವಿಧ ವಿವಿಧ ಕೇಂದ್ರಗಳ- ವಿಭಾಗಗಳನ್ನು ನಿರ್ವಹಿಸುತ್ತಿರುವ ವೈದ್ಯರು, ಸಹಾಯಕ ಸಿಬ್ಬಂದಿ ಮತ್ತು ಕಾರ್ಮಿಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: