ಕಾಂಗ್ರೆಸ್ ಮುಖಂಡ ಮೃತಪಟ್ಟು 2 ಗಂಟೆ ಅವಧಿಯಲ್ಲಿ ಪತ್ನಿಯೂ ಸಾವು!

ಉಳ್ಳಾಲ: ಪತಿ ಮೃತಪಟ್ಟು ಎರಡು ಗಂಟೆಯೊಳಗೆ ಪತ್ನಿಯೂ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಬುಧವಾರ ರಾತ್ರಿ ನಡೆದಿದ್ದು, ಪತಿ ಪತ್ನಿ ಇಬ್ಬರು ಕೂಡ ಒಂದೇ ದಿನ ಮೃತಪಟ್ಟಿದ್ದಾರೆ.
ನ್ಯುಮೋನಿಯಾದಿಂದ ಬಳಲುತ್ತಿದ್ದ ಕಾಂಗ್ರೆಸ್ ಮುಖಂಡರೂ ಆಗಿರುವ ನಝೀರ್ ಅಹ್ಮದ್ ಅವರಿಗೆ ಬುಧವಾರ ತಡರಾತ್ರಿ ತೀವ್ರ ರಕ್ತದೊತ್ತಡ ಕಾಣಿಸಿಕೊಂಡಿದೆ. ಇದರಿಂದಾಗಿ ಅವರನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅವರು ರಾತ್ರಿ ಸುಮಾರು 12:30ರ ವೇಳೆಗೆ ಮೃತಪಟ್ಟಿದ್ದಾರೆ.
ಆಸ್ಪತ್ರೆಗೆ ತೆರಳಿದ ಪತಿಯ ಮೃತದೇಹ ಕಂಡ ನಝೀರ್ ಅವರ ಪತ್ನಿ ಜಮೀಲಾ ಅವರು ಪತಿಯ ಸಾವನ್ನು ಸಹಿಸಲು ಸಾಧ್ಯವಾಗದೇ ತೀವ್ರವಾಗಿ ಖಿನ್ನರಾಗಿದ್ದಾರೆ. ರಾತ್ರಿ 2:30ರ ಸುಮಾರಿಗೆ ಅವರಿಗೆ ಏಕಾಏಕಿ ಹೃದಯಾಘಾತವಾಗಿದ್ದು ಅವರು ಕೂಡ ಕೊನೆಯುಸಿರೆಳೆದಿದ್ದಾರೆ.
ಮುಸ್ಲಿಂ ಲೀಗ್ ಉಳ್ಳಾಲ ವಲಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನಝೀರ್ ಅಹ್ಮದ್ ಬಳಿಕ ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ನಗರ ಪಂಚಾಯಿತಿಗೆ ಸ್ಪರ್ಧಿಸಿದ್ದರು. 15 ವರ್ಷಗಳ ಕಾಲ ಮೇಲಂಗಡಿ ಉರ್ದು ಶಾಲೆಯ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಸದ್ಯ ಉಳ್ಳಾಲ ನಗರ ಸಭೆಯ ಕುಡಿಯುವ ನೀರಿನ ಗುತ್ತಿಗೆದಾರರಾಗಿದ್ದರು.