ಮೀಸಲಾತಿ ಹಿಂಸಾಚಾರ: ಅಜಿತ್ ಪವಾರ್ ಮಹಾರಾಷ್ಟ್ರ ಸರ್ಕಾರ ತೊರೆಯಲೇಬೇಕು; ಮರಾಠಾ ಸಂಘಟನೆಗಳ ಆಗ್ರಹ
ಪುಣೆಯ ಜಲ್ನಾದಲ್ಲಿ ಮೀಸಲಾತಿಗಾಗಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿರುವುದನ್ನು ವಿರೋಧಿಸಿ ವಿವಿಧ ಮರಾಠಾ ಸಂಘಟನೆಗಳು ಸೋಮವಾರ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ನಗರದಲ್ಲಿ ಪ್ರತಿಭಟನೆ ನಡೆಸಿದವು.
ಅಲ್ಲದೇ ಉಪಮುಖ್ಯಮಂತ್ರಿ ಅಜಿತ್ ಪವಾರ್ ಶಿವಸೇನೆ-ಬಿಜೆಪಿ ಸರ್ಕಾರದಿಂದ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಪುಣೆ ನಗರದಲ್ಲಿ ಪ್ರತಿಪಕ್ಷ ಶಿವಸೇನೆ (ಯುಬಿಟಿ), ಎನ್ ಸಿಪಿ (ಶರದ್ ಪವಾರ್ ಗುಂಪು) ಮತ್ತು ಕಾಂಗ್ರೆಸ್ ಪಕ್ಷವು ಕೊಥ್ರುಡ್ ಪ್ರದೇಶದಲ್ಲಿ ಬೀದಿಗಿಳಿದು ಮರಾಠಾ ಸಮುದಾಯದ ತಾಳ್ಮೆಯನ್ನು ಪರೀಕ್ಷಿಸದಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.
ಬಾರಾಮತಿಯಲ್ಲಿ ಮರಾಠಾ ಸಂಘಟನೆಗಳ ಸದಸ್ಯರು ಸ್ಥಳೀಯ ಎನ್ ಸಿಪಿ ಶಾಸಕ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ಸರ್ಕಾರವನ್ನು ತೊರೆಯುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಬಿಜೆಪಿ ನಾಯಕ ಮತ್ತು ಗೃಹ ಇಲಾಖೆಯನ್ನು ನಿರ್ವಹಿಸುವ ಮತ್ತೊಬ್ಬ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರುದ್ಧವೂ ಘೋಷಣೆಗಳನ್ನು ಕೂಗಲಾಯಿತು.
ಏಕನಾಥ್ ಶಿಂಧೆ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿರುವ ಫಡ್ನವೀಸ್ ಕಳೆದ ಒಂದು ವರ್ಷದಿಂದ ಮರಾಠಾ ಮೀಸಲಾತಿಗಾಗಿ ಯಾವುದೇ ಪ್ರಯತ್ನಗಳನ್ನು ಮಾಡಲು ವಿಫಲರಾಗಿದ್ದಾರೆ. ಮರಾಠರ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಪುಣೆ ನಗರದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಎನ್ ಸಿಪಿಯ ಶರದ್ ಪವಾರ್ ನೇತೃತ್ವದ ಬಣಕ್ಕೆ ಸೇರಿದ ಅಂಕುಶ್ ಕಾಕಡೆ ಹೇಳಿದರು.