ರಾಜ್ಯದ 20 ಜಿಲ್ಲೆಗಳಲ್ಲಿ ಮಳೆಯ ನಿರೀಕ್ಷೆ: ಹೀಗಿದೆ ಹವಾಮಾನ ವರದಿ

ಬೆಂಗಳೂರು: ಕರ್ನಾಟಕದಲ್ಲಿ ಇಂದು ವ್ಯಾಪಕವಾಗಿ ಒಣಹವೆ ಇದ್ದರೂ, ಬಾಗಲಕೋಟೆ, ಬೆಳಗಾವಿ, ಬೀದರ್, ಮೈಸೂರು, ಮಂಡ್ಯ, ದಾವಣಗೆರೆ ಸೇರಿ 20 ಜಿಲ್ಲೆಗಳಲ್ಲಿ ಕೆಲವು ಕಡೆ ಹಗುರ ಚದುರಿದ ಮಳೆ ನಿರೀಕ್ಷಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಮಳೆ ಮುನ್ಸೂಚನಾ ವರದಿ ಹೇಳಿದೆ.
ಇದರಂತೆ, ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಏಪ್ರಿಲ್ 18ರ ಬೆಳಗ್ಗೆ 8:30ರ ತನಕ ಒಣಹವೆ, ಹೆಚ್ಚು ಉಷ್ಣಾಂಶ ಮತ್ತು ಆರ್ದ್ರತೆ ಇರಲಿದೆ. ಇನ್ನು ಏಪ್ರಿಲ್ 18ರಿಂದ 20ರ ತನಕ ಈ ಮೂರೂ ಜಿಲ್ಲೆಗಳಲ್ಲಿ ಇದೇ ಹವಾಮಾನ ಮುಂದುವರಿಯಲಿದೆ. ಆದಾಗ್ಯೂ, 19 ಮತ್ತು 20ರಂದು ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಸಾಧ್ಯತೆ ಇದೆ. ಗಾಳಿಯ ವೇಗ ಗಂಟೆಗೆ 30 ರಿಂದ 40 ಕಿ.ಮೀ. ಇರಬಹುದು ಎಂದು ಮಳೆ ಮುನ್ಸೂಚನೆ ವರದಿ ವಿವರಿಸಿದೆ.
ಇನ್ನುಳಿದಂತೆ ಉತ್ತರ ಒಳನಾಡಿನ ಹಾವೇರಿಯಲ್ಲಿ ಒಣಹವೆ ಇರಲಿದ್ದು, ಮಳೆಯ ಸೂಚನೆ ಇಲ್ಲ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳ ಒಂದೆರಡು ಕಡೆ ಹಗುರವಾದ ಚದುರಿದ ಮಳೆ ಬೀಳಬಹುದು.
ದಕ್ಷಿಣ ಒಳನಾಡಿನ ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ತುಮಕೂರುಗಳಲ್ಲಿ ಹಗುರ, ಚದುರಿದ ಮಳೆಯನ್ನು ನಿರೀಕ್ಷಿಸಬಹುದು.
ದಕ್ಷಿಣ ಒಳನಾಡಿನ ವಿಜಯನಗರ, ಶಿವಮೊಗ್ಗ, ಕೋಲಾರ, ಹಾಸನ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರಗಳಲ್ಲಿ ಮಳೆಯ ಸುಳಿವೇ ಇಲ್ಲ. ಒಣಹವೆ ಮತ್ತು ತಾಪಮಾನ ಹೆಚ್ಚಳ ಇರಲಿದೆ ಆದಾಗ್ಯೂ ಏಪ್ರಿಲ್ 19 ಮತ್ತು 20ರಂದು ಕೆಲವು ಕಡೆಗೆ ಬಿರುಗಾಳಿ ಸಹಿತ ಗುಡುಗು ಮಿಂಚು ಇರಬಹುದು. ಬಿರುಗಾಳಿಯ ವೇಗ 30ರಿಂದ 40 ಕಿ.ಮೀ. ಇರಬಹುದು ಎಂದು ವರದಿ ಹೇಳಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth