ಟಯರ್ ಪಂಕ್ಚರ್ ಅಲ್ಲ, ರಾಜ್ಯಾಧ್ಯಕ್ಷರ ತಲೆ ಹೊಡೆಯಬೇಕಿತ್ತು: ಮಹೇಶ್ ಶೆಟ್ಟಿ ತಿಮರೋಡಿ ಕಿಡಿ
![timarodi](https://www.mahanayaka.in/wp-content/uploads/2022/07/timarodi.jpg)
ಬೆಳ್ಳಾರೆ: ಬೆಳ್ಳಾರೆಯಲ್ಲಿ ಗಾಡಿ ಪಂಕ್ಷರ್ ಅಲ್ಲ, ರಾಜ್ಯಾಧ್ಯಕ್ಷರ ತಲೆ ಹೊಡೆಯ ಬೇಕಿತ್ತು ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ಮಾತನಾಡಿದ ಅವರು, ಹಿಂದೂ ರಾಷ್ಟ್ರದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ, ಅಧಿಕಾರಕ್ಕೆ ಬಂದ ನಂತರ ಹಿಂದೂಗಳನ್ನೇ ಹತ್ಯೆ ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಬಿಜೆಪಿಯೊಟ್ಟಿಗೆ ಇರುತ್ತಿದ್ದರೆ, ನಾವು ಕೂಡ ಹೆಣವಾಗುತ್ತಿದ್ದೆವು ಎಂದು ಆಕ್ರೋಶ ವ್ಯಕ್ತಪಡಿಸಿದ ತಿಮರೋಡಿ, ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಅವರಿಗೆ ಜಿಲ್ಲೆ ಪ್ರವೇಶಕ್ಕೆ ನಿಷೇಧ ಹೇರಿರುವುದನ್ನು ವಿರೋಧಿಸಿದರು.
ಪ್ರಮೋದ್ ಮುತಾಲಿಕ್ ಏನು ಮಾಡಿದ್ದಾರೆ? ಅವರೇನು ಭಯೋತ್ಪಾದಕರೇ? ಬೆಳ್ಳಾರೆ, ಮಂಗಳೂರು, ಬೆಂಗಳೂರು ಎಂದೆಲ್ಲ ಎಲ್ಲೆಲ್ಲೋ ಭಯೋತ್ಪಾದಕರ ತಿರುಗಾಟಕ್ಕೆ ಅವಕಾಶ ನೀಡಿರುವ ಬಿಜೆಪಿ ಸರ್ಕಾರ ಈಗ ಹಿಂದೂ ನಾಯಕನನ್ನು ನಿರ್ಬಂಧಿಸುವ ಮೂಲಕ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆಯಾಗುವುದು ಮಾಮೂಲಿಯಾಗಿದೆ. ಹಿಜಾಬ್ ಗಲಾಟೆಯಾಗುವಾಗಲೇ ನಾನು ಹೇಳಿದ್ದೆ. ಯಾರಾದರೂ ದೊಡ್ಡ ಲೀಡರ್ ನ ಕೊಲೆಯಾಗ್ತದೆ ಅಂತ. ಹರ್ಷನನ್ನು ಹತ್ಯೆ ಮಾಡಿದರು. ಆ ಆರೋಪಿಗಳು ಜೈಲಿನಲ್ಲಿ ಕುಳಿತುಕೊಂಡು ಬಿರಿಯಾನಿ ತಿಂದು, ವಿಡಿಯೋ ಕಾಲ್ ಮಾಡಿಕೊಂಡು ಇದ್ದಾರೆ. ಇವರು ಹಿಂದೂ ಅಂತ ಹೇಳಿಕೊಂಡು ವಿಶ್ವ ಗುರು ಕಟ್ಟಲು ಹೊರಟವರಾ? ಎಂದು ಪ್ರಶ್ನಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಕೊಲೆಗಳು ಮಾಮೂಲಿ ಎಂದ ಅವರು, ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಆರಂಭವಾದ ಯುವಕರ ಆಕ್ರೋಶ ಇಲ್ಲಿಗೆ ನಿಲ್ಲಬಾರದು, ಮುಂದುವರಿಯಬೇಕು. ಎಲೆಕ್ಷನ್ ವೇಳೆ ಓಟು ಕೇಳಿ ಬಂದರೆ ಮೆಟ್ಟಲ್ಲಿ ಹೊಡೆಯಬೇಕು ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka