ಮಠಗಳಿಗೆ ನೀಡಲು ಹಣ ಇದೆ, ಸಾರಿಗೆ ನೌಕರರಿಗೆ ನೀಡಲು ಹಣ ಇಲ್ಲವೇ? | ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನೆ
ತುಮಕೂರು: ಮಠಗಳಿಗೆ, ನಿಗಮಗಳನ್ನು ರಚನೆ ಮಾಡಲು, ಅಭಿವೃದ್ಧಿ ಮಂಡಳಿಗಳಿಗೆ ನೀಡಲು ಸರ್ಕಾರದ ಬಳಿ ಹಣವಿದೆ. ಆದರೆ ಬಡ ನೌಕರರಿಗೆ ನೀಡಲು ಹಣವಿಲ್ಲವೇ ಎಂದು ಸಾರಿಗೆ ನೌಕರರ ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಕೋಡಿಹಳ್ಳಿ, 6ನೇ ವೇತನ ಆಯೋಗ ಜಾರಿಮಾಡುವಂತೆ ಮೊದಲಿನಿಂದಲೂ ಬೇಡಿಕೆ ಇಟ್ಟಿದ್ದೇವೆ. ಆದರೆ ಸರ್ಕಾರ ಆರ್ಥಿಕ ಸಂಕಷ್ಟದ ನೆಪ ಹೇಳಿ ಬೇಡಿಕೆ ಈಡೇರಿಸಲು ಮುಂದಾಗುತ್ತಿಲ್ಲ. ಈಗ ಮುಷ್ಕರ ನಡೆಸಿದರೆ ಎಸ್ಮಾ ಜಾರಿ ಬೆದರಿಕೆ ಹಾಕಲಾಗುತ್ತಿದೆ. ಈ ರೀತಿ ಹೆದರಿಸಿ ಕಾರ್ಮಿಕರನ್ನು ಅರೆ ಹೊಟ್ಟೆಯಲ್ಲಿ ದುಡಿಸಿಕೊಳ್ಳುವುದು ನ್ಯಾಯವೇ ಎಂದು ಪ್ರಶ್ನಿಸಿದದರಲ್ಲದೇ, ಅನ್ಯಾಯ ಪ್ರಶ್ನಿಸಿದ್ದಕ್ಕೆ ಎಸ್ಮಾ ಜಾರಿ ಮಾಡುವುದು ಸರಿಯೇ..? ಎಸ್ಮಾ ಜಾರಿ ಮಾಡಲು ಸಾರಿಗೆ ನೌಕರರು ಯಾವ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬುದನ್ನು ಸರ್ಕಾರ ತಿಳಿಸಲಿ ಎಂದು ಒತ್ತಾಯಿಸಿದರು.
ಸಾರಿಗೆ ನೌಕರರ ಬೇಡಿಕೆ ಈಡೆರಿಸಲು 700 ಕೋಟಿ ರೂಪಾಯಿ ಬೇಕಾಗುತ್ತದೆ. 700 ಕೋಟಿ ನಷ್ಟವಾಗುತ್ತದೆ ಎಂದು ಮಾತುಕತೆಗೆ ಹೋದಾಗ ಸರ್ಕಾರ ಹೇಳಿದೆ. ಒಂದುವರೆ ಲಕ್ಷ ಬಡ ಕಾರ್ಮಿಕರಿಗೆ ಇಷ್ಟು ಹಣ ನೀಡಿದರೆ ಅದು ನಷ್ಟ ಹೇಗೆ ಆಗುತ್ತದೆ. ನಿಮಗೆ ಬೇಕಾದ ಮಠಗಳಿಗೆ, ಜಾತಿ ಧರ್ಮಗಳಿಗೆ, ನಿಗಮ ಮಂಡಳಿ, ಅಭಿವೃದ್ಧಿ ಮಂಡಳಿಗೆ 500 ಕೊಟಿಗಳಿಗೂ ಹೆಚ್ಚು ಹಣಗಳನ್ನು ಬಿಡುಗಡೆ ಮಾಡುತ್ತಿದ್ದೀರಿ ಅದು ನಿಮಗೆ ನಷ್ಟವೆನಿಸುತ್ತಿಲ್ಲವೇ ಎಂದು ಸರ್ಕಾರವನ್ನು ಅವರು ಮಾರ್ಮಿಕವಾಗಿ ಪ್ರಶ್ನಿಸಿದರು.