ವಿಮಾನದ ಶೌಚಾಲಯದಲ್ಲಿ ಸಿಲುಕಿದ ಪ್ರಯಾಣಿಕನಿಗೆ ಸಿಬ್ಬಂದಿ ನೀಡಿದ ಸೂಚನೆಯ ಪತ್ರ ವೈರಲ್

ನವದೆಹಲಿ: ಜನವರಿ 16 ರಂದು, ಮುಂಬೈನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನದ ಟಾಯ್ಲೆಟ್ ಡೋರ್ ಲಾಕ್ ಆದ ಪರಿಣಾಮ ಒಂದು ಗಂಟೆಗಳ ಕಾಲ ಶೌಚಾಲಯದಲ್ಲೇ ಅವರು ಸಿಲುಕಿದ ಘಟನೆ ನಡೆದಿದೆ. ಶೌಚಾಲದೊಳಗೆ ಸಿಲುಕಿದ್ದ ಪ್ರಯಾಣಿಕ ಆತಂಕದಲ್ಲಿದ್ದರೆ, ಏರ್ ಲೈನ್ಸ್ ಸಿಬ್ಬಂದಿ ಅವರಿಗೆ ಧೈರ್ಯ ತುಂಬಿದ ರೀತಿ ಇದೀಗ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.
ಮುಂಬೈ-ಬೆಂಗಳೂರು ವಿಮಾನದಲ್ಲಿದ್ದ ಸ್ಪೈಸ್ ಜೆಟ್ ವಿಮಾನದ ಟಾಯ್ಲೆಟ್ ಗೆ ಪ್ರಯಾಣಿಕರೊಬ್ಬರು ತೆರಳಿದ ಬಳಿಕ ಆ ಡೋರ್ ಲಾಕ್ ಆಗಿತ್ತು. ಡೋರ್ ತೆರೆಯುತ್ತಿಲ್ಲ ಮತ್ತು ತಾಂತ್ರಿಕ ದೋಷ ಇರುವುದು ಸಿಬ್ಬಂದಿಗೆ ಸ್ಪಷ್ಟವಾಗಿತ್ತು.
ಅವರನ್ನು ರಕ್ಷಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಯಿತು. ಆದರೆ ಶೌಚಾಲಯದ ಬಾಗಿಲು ತೆರೆದುಕೊಳ್ಳಲೇ ಇಲ್ಲ. ಅತ್ತ ಶೌಚಾಲಯದೊಳಗಿದ್ದ ಪ್ರಯಾಣಿಕ ತೀವ್ರ ಆಘಾತಗೊಂಡಿದ್ದರು. ಅವರನ್ನು ಸಮಾಧಾನ ಪಡಿಸಲು ಸಿಬ್ಬಂದಿ , ಕಾಗದದ ಮೇಲೆ ಸಂದೇಶವೊಂದನ್ನು ಬರೆದು ಬಾಗಿಲಿನ ಕೆಳಗಿನಿಂದ ನೀಡಿದರು.
ಆ ಪತ್ರದಲ್ಲಿ ಸಾರ್, ನಾವು ಬಾಗಿಲು ತೆರೆಯಲು ಪ್ರಯತ್ನಿಸಿದೆವು, ಆದರೆ ನಮಗೆ ತೆರೆಯಲು ಸಾಧ್ಯವಾಗಲಿಲ್ಲ, ಗಾಬರಿಯಾಗಬೇಡಿ, ನಾವು ಕೆಲವೇ ನಿಮಿಷಗಳಲ್ಲಿ ಇಳಿಯುತ್ತೇವೆ. ಆದ್ದರಿಂದ ದಯವಿಟ್ಟು ಕಮೋಡ್ ಮುಚ್ಚಳವನ್ನು ಮುಚ್ಚಿ, ಅದರ ಮೇಲೆ ಕುಳಿತು ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಿ. ಎಂಜಿನಿಯರ್ ಬರುತ್ತಾರೆ, ಗಾಬರಿಯಾಗಬೇಡಿ ಎಂದು ಸೂಚನೆ ನೀಡಲಾಯಿತು.
ಈ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಏರ್ ಲೈನ್ಸ್ ಸಿಬ್ಬಂದಿಯ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ. ವಿಮಾನವನ್ನು ಬೆಂಗಳೂರಿನಲ್ಲಿ ಇಳಿಸಿದ ನಂತರ ಪ್ರಯಾಣಿಕರನ್ನು ರಕ್ಷಿಸಲಾಯಿತು ಮತ್ತು ಎಂಜಿನಿಯರ್ ಗಳು ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ.