ಕೊರಗ ಕುಟುಂಬಗಳಿಗೆ ಭೂಮಿ ನೀಡುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರಹ: ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಧರಣಿ ಅಂತ್ಯ

ಕುಂದಾಪುರ: ಡಾಕ್ಟರ್ ಮಹಮ್ಮದ್ ಪೀರ್ ವರದಿ ಪ್ರಕಾರ ಪ್ರತಿ ಕೊರಗ ಕುಟುಂಬಗಳಿಗೆ ಭೂಮಿಯನ್ನು ನೀಡಲು ಹಾಗೂ ನಾಡ ಗ್ರಾಮದ ಪಡುಕೋಣೆ ಕೊರಗ ಸಮುದಾಯದ ಭೂಮಿಗೆ ಸಂಬಂಧಿಸಿದ ವಿವಾದಗಳು, ಸಮಸ್ಯೆಗಳನ್ನು ಇತ್ಯರ್ಥ ಮಾಡಲು ಒತ್ತಾಯಿಸಿ ಕೊರಗ ಸಂಘಟನೆಗಳು ಇಂದು ನಾಡ ಗ್ರಾಮ ಪಂಚಾಯತ್ ಎದುರು ಇಂದು ಧರಣಿ ಸತ್ಯಾಗ್ರಹವನ್ನು ನಡೆಸಿತು.
ಕರಾವಳಿ ಕರ್ನಾಟಕದ ಮೂಲನಿವಾಸಿಗಳಾದ ಪರಿಶಿಷ್ಟ ಪಂಗಡ ಕೊರಗ ಸಮುದಾದ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ತಿರ್ವಗತಿಯಲ್ಲಿ ಕಡಿಮೆಯಾಗಿ ಅಳಿವಿನಂಚಿಗೆ ಸಾಗುತ್ತಿದೆ. ಸಮುದಾಯವನ್ನು ಉಳಿಸುವ ನಿಟ್ಟಿನಲ್ಲಿ ಸರಕಾರ ಕೊರಗ ಸಮುದಾಯದ ಮೇಲೆ ವಿಶೇಷ ಗಮನ ನೀಡುವುದು ಅಗತ್ಯವಿದೆ. ಕೊರಗ ಸಮುದಾಯದ ಸಮಗ್ರ ಅಭಿವೃದ್ಧಿಗೆ ಸರಕಾರ 1994 ರಲ್ಲಿ ಡಾಕ್ಟರ್ ಮಹಮ್ಮದ್ ಪೀರ್ ಆಯೋಗದ ವರದಿ ಅಂಗೀಕರಿಸಿದೆ. ಆದರೆ ಡಾಕ್ಟರ್ ಮಹಮ್ಮದ್ ಪೀರ್ ವರದಿ ಜಾರಿಗೆ ತರುವಲ್ಲಿ ಸರಕಾರ ವಿಫಲವಾಗಿದೆ ಧರಣಿ ನಿರತರು ಆರೋಪಿಸಿದರು
ಮಹಮ್ಮದ್ ಪೀರ್ ವರದಿ ಅನ್ವಯ ಪ್ರತಿ ಕೊರಗ ಕುಟುಂಬಗಳಿಗೆ 2.50 ಎಕರೆ ಭೂಮಿಯನ್ನು ನೀಡಬೇಕು ಎನ್ನುವುದು ನಮ್ಮ ಬಹು ಮುಖ್ಯ ಬೇಡಿಕೆಯಾಗಿದೆ. ಹಾಗೆಯೇ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗ ಸಮುದಾಯದ ಭೂಮಿಗೆ ಸಂಬಂಧಿಸಿದ ವಿವಾದಗಳು, ಸಮಸ್ಯೆಗಳನ್ನು ಬಗೆಹರಿಸಲು ತಾವು ತುರ್ತು ಮಧ್ಯಪ್ರವೇಶ ಮಾಡಿ ಬಗ್ಗೆಹರಿಸುವುದು ಅಗತ್ಯವಿದೆ ಎಂದು ಅವರು ಒತ್ತಾಯಿಸಿದರು.
ಪಡುಕೋಣೆ ಕೊರಗ ಗುಂಪಿನಿಂದ ಮೆರವಣಿಗೆ ಮೂಲಕ ನಾಡ ಗ್ರಾಮ ಪಂಚಾಯತ್ ಎದುರು ಧರಣಿ ಸತ್ಯಾಗ್ರಹ ಪ್ರಾರಂಭ ಮಾಡಲಾಯಿತು. ಶ್ರೀಧರ ನಾಡ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನಾಡಿದರು. ಹಾಗೇ ನಾಡ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಬೈಂದೂರು ತಹಶೀಲ್ದಾರ್ ರವರು ಧರಣಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ಧರಣಿ ನಿರತರು ಜಿಲ್ಲಾ ಅಧಿಕಾರಿಗಳು ಬರುವವರೆಗೆ ನಮ್ಮ ಹೋರಾಟ ನಡೆಯಲಿದೆ. ಜಿಲ್ಲಾಧಿಕಾರಿಗಳನ್ನು ಸ್ಥಳಕ್ಕೆ ಕರೆಯಲು ಪಟ್ಟು ಹಿಡಿದರು.
ಬೇಡಿಕೆಗಳು: ಡಾಕ್ಟರ್ ಮಹಮದ್ ಪೀರ್ ವರದಿ ಪ್ರಕಾರ ಪ್ರತಿ ಕೊರಗ ಸಮುದಾಯದ ಕುಟುಂಬಗಳಿಗೆ ತಲಾ 2.50 ಎಕರೆ ಭೂಮಿಯನ್ನು ನೀಡಬೇಕು.
ಅನಾಧಿಕಾಲದಿಂದ ಕೊರಗ ಸಮುದಾಯದ ಸ್ವಾಧೀನ ಇರುವ ಪಡುಕೋಣೆ ಕೊರಗ ಕುಟುಂಬಗಳ ಭೂಮಿಯ ವಿವಾದ ಬಗೆಹರಿಸಿ ಭೂಮಿಯ ಸಂಪೂರ್ಣ ಹಕ್ಕು ನೀಡುವುದು. ಕೊರಗರ ಕಂದಾಯ ಅದಾಲತ್ ನಲ್ಲಿ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ ಹಕ್ಕುಪತ್ರ ನೀಡಬೇಕು. ನಾಡಗ್ರಾಮದ ಸರ್ವೇ ನಂಬರ್ 183/11 ರಲ್ಲಿ ವಾಸವಿರುವ ಕೊರಗ ಸಮುದಾಯದಲ್ಲಿ ಭೂಮಿಯ ಆರ್.ಟಿ.ಸಿ ಇದ್ದರು ಸಹ ಇದುವರೆಗೆ 1 ರಿಂದ 5 ಮಾಡಿ ನಕ್ಷೆ ಕಟ್ ಆಗಿರುದಿಲ್ಲ. ಆದರಿಂದ ನಕ್ಷೆ ಮಾಡಲು ಕ್ರಮ ವಹಿಸಬೇಕು.
ಮೇಲಿನ ನಮ್ಮ ಬೇಡಿಕೆಗಳ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೊರಗ ಸಮುದಾಯದ ಮುಖಂಡರು ಮತ್ತು ಪಡುಕೋಣೆ ಕೊರಗ ಸಮುದಾಯದ ಭೂಮಿಗೆ ಸಂಬಂಧಿಸಿದ ವಿವಾದದ ಎದುರುದಾರರ ಜೊತೆಗೆ ಜಂಟಿ ಸಭೆಯನ್ನು ಕರೆದು ಸಮಸ್ಯೆ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳಬೇಕು.
ಕೊರಗ ಸಮುದಾಯದ ಮುಖಂಡರು ಗಣೇಶ ವಿ. ಕೊರಗ, ಗೌರಿ ಕೆಂಜೂರು, ಉಡುಪಿ ಜಿಲ್ಲಾ ಕೊರಗ ಸಂಘಟನೆ ಜಿಲ್ಲಾ ಅಧ್ಯಕ್ಷರಾದ ಗೌರಿ ಕೆಂಜೂರು, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕರು ಶ್ರೀಧರ ನಾಡ, ರಾಜು ಪಡುಕೋಣೆ, ವೆಂಕಟೇಶ್ ಕೋಣಿ, ಸುರೇಶ್ ಕಲಾಗಾರ್, ಚಂದ್ರಶೇಖರ, ಸುನೀತಾ, ಮಮತಾ, ಹೊನ್ನಮ, ಮಹಾಬಲ ಇತರರು ಹೋರಾಟದ ನೇತೃತ್ವ ವಹಿಸಿದರು.
ಸಹಾಯಕ ಆಯುಕ್ತರು ಜಿಲ್ಲಾಧಿಕಾರಿಗಳ ಪರವಾಗಿ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಆಗಮಿಸಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ 5 ಜುಲೈ 2023 ರಂದು ಬೆಳಿಗ್ಗೆ 11 ಘಂಟೆಗೆ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗ ಸಮುದಾಯಗಳ ಭೂಮಿ ಹಕ್ಕುಗಳಿಗೆ ಸಂಬಂಧಿಸಿದಂತೆ ವಿಶೇಷ ಸಭೆ ನಡೆಸಿ ಬೇಡಿಕೆ ಈಡೇರಿಸುವ ಬಗ್ಗೆ ಲಿಖಿತ ರೂಪದಲ್ಲಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಧರಣಿ ಸತ್ಯಾಗ್ರಹ ಹಿಂತೆಗೆದುಕೊಳ್ಳಲಾಯಿತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw