ಸ್ನೇಹಿತನಿಗೆ ಸಾಲಕೊಟ್ಟು ಪ್ರಾಣ ಕಳೆದುಕೊಂಡ ಯುವಕ! | 4 ಸಾವಿರ ರೂ.ಗಾಗಿ ಭೀಕರ ಹತ್ಯೆ

kalaburgi
29/06/2021

ಕಲಬುರಗಿ:  ನಾಲ್ಕು ಸಾವಿರ ರೂಪಾಯಿಗಾಗಿ ವ್ಯಕ್ತಿಯೋರ್ವ ತನ್ನ ಸ್ನೇಹಿತನ ತಲೆಗೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ತಾಲೂಕಿನ ಅವರಾದ-ಆಲಗೂಡ ಗ್ರಾಮದ ರಸ್ತೆ ಬದಿಯಲ್ಲಿ ನಡೆದಿದೆ.

ಕಲಬುರಗಿ ರಾಮನಗರ ನಿವಾಸಿ, 28 ವರ್ಷ ವಯಸ್ಸಿನ  ಸಂತೋಷ್ ಹೂಗಾರ್ ಹತ್ಯೆಗೀಡಾದ ಯುವಕನಾಗಿದ್ದಾನೆ.  ತನ್ನ ಸ್ನೇಹಿತ ಶಿವಾಜಿ ಎಂಬಾತನಿಗೆ 4 ಸಾವಿರ ರೂಪಾಯಿ ಸಾಲವಾಗಿ ನೀಡಿದ್ದ. ಆದರೆ ತಿಂಗಳುಗಳು ಕಳೆದರೂ ಆತ ನೀಡದಿದ್ದಾಗ, ಹಣ ನೀಡು ಇಲ್ಲದಿದ್ದರೆ, ಹುಡುಗರಿಂದ ಹೊಡೆಸುತ್ತೇನೆ ಎಂದು ಸಂತೋಷ್ ಹೇಳಿದ್ದ ಎನ್ನಲಾಗಿದೆ.

ಇದರಿಂದ ಸಂತೋಷ್ ಮೇಲೆ ತೀವ್ರ ಕೋಪಗೊಂಡ ಶಿವಾಜಿ, ತನ್ನ ಇನ್ನೋರ್ವ ಸ್ನೇಹಿತ ಅರುಣ್ ಕುಮಾರ್ ನೊಂದಿಗೆ ಸೇರಿ ಸಂತೋಷ್ ನನ್ನು ಆಟೋದಲ್ಲಿ ಕರೆದುಕೊಂಡು ಹೋಗಿ, ಡಾಬಾವೊಂದರಲ್ಲಿ ಕಂಠಪೂರ್ತಿ ಕುಡಿಸಿದ್ದಾರೆ. ಆ ಬಳಿಕ ಅವರಾದ-ಆಲಗೂಡ ರಸ್ತೆಗೆ ಕರೆದುಕೊಂಡು ಹೋಗಿ ಆತನ ಜೊತೆಗೆ ಜಗಳವಾಡಿ, ಮುಖ ಹಾಗೂ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

ಇನ್ನೂ ಸುದ್ದಿ ತಿಳಿಯುತ್ತಿದ್ದಂತೆಯೇ ಡಿಸಿಪಿ ಅಡ್ಡೂರು ಶ್ರೀನಿವಾಸುಲು ಹಾಗೂ ಪೊಲೀಸ್ ಅಧಿಕಾರಿಗಳಾದ ಶ್ರೀಕಾಂತ ಕಟ್ಟಿಮನಿ, ಜೆ.ಹೆಚ್.ಇನಾಮ್ ದಾರ್, ಪಿಎಸ್ ಐ ಕವಿತಾ ಚವ್ಹಾಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ. ಘಟನೆಯ ಬಳಿ ಆರೋಪಿಗಳ ಪರಾರಿಯಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version