ತಂದೆಯ ಬಳಿ ಎಲ್ಲ ವಿಷಯ ಹೇಳುತ್ತಿದ್ದಾಳೆ ಎಂದು ಮಗುವನ್ನೇ ಕೊಂದ ತಾಯಿ! - Mahanayaka
3:25 AM Thursday 19 - September 2024

ತಂದೆಯ ಬಳಿ ಎಲ್ಲ ವಿಷಯ ಹೇಳುತ್ತಿದ್ದಾಳೆ ಎಂದು ಮಗುವನ್ನೇ ಕೊಂದ ತಾಯಿ!

sudha vinutha
08/04/2021

ಬೆಂಗಳೂರು: ತಂದೆಯ ಬಳಿ ಎಲ್ಲ ಹೇಳುತ್ತಿದ್ದಳು ಎಂದು ತನ್ನ ಮಗುವನ್ನೇ ಮಹಿಳೆಯೋರ್ವಳು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಲ್ಲತ್ತಹಳ್ಳಿ ನಿವಾಸಿ ವೀರಣ್ಣ ಅವರ 3 ವರ್ಷದ ಪುತ್ರಿ ವಿನುತಾ ಹತ್ಯೆಗೀಡಾದ ಮಗುವಾಗಿದ್ದು, 28 ವರ್ಷ ವಯಸ್ಸಿನ ಸುಧಾ ಕೃತ್ಯ ಎಸಗಿದ ಆರೋಪಿಯಾಗಿದ್ದಾಳೆ. ಸದ್ಯ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ವೀರಣ್ಣ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಎರಡನೇ ಮದುವೆಯಾಗಿದ್ದರು. ಟೋಲ್ ಗೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಸುಧಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದು, ಈ ದಂಪತಿಗೆ ಒಂದು ಮಗು ಕೂಡ ಜನಿಸಿತ್ತು. ಮಗುವಿಗೆ 3 ವರ್ಷವಾಗುತ್ತಿದ್ದಂತೆಯೇ ಹೊಸ ಸಮಸ್ಯೆ ಆರಂಭವಾಗಿದ್ದು, ಮಗು ತಾಯಿಗಿಂತಲೂ ತಂದೆಯನ್ನು ಹೆಚ್ಚಾಗಿ ಹಚ್ಚಿಕೊಳ್ಳಲು ಆರಂಭಿಸಿದೆ.


Provided by

ತಾಯಿ ಸುಧಾ ಯಾರ ಜೊತೆಗೆ ಮಾತನಾಡಿದರೂ ತಂದೆಗೆ ಬಾಲಕಿ ಹೇಳುತ್ತಿದ್ದಳು. ಈ ವಿಚಾರಕ್ಕೆ ಸಂಬಂಧಿಸಿದಂತೆ  ಕೋಪಗೊಂಡಿದ್ದ ಸುಧಾ ಮಗುವಿಗೆ ಹೊಡೆದಿದ್ದಳು. ಈ ವಿಚಾರಕ್ಕೆ ಸಂಬಂಧಿಸಿದಂತೆ  ದಂಪತಿಯ ನಡುವೆ ಜಗಳ ಕೂಡ ಆಗಿತ್ತು.

ಮಂಗಳವಾರ ಮಧ್ಯಾಹ್ನ ದಂಪತಿಯ ನಡುವೆ ಟಿವಿ ವಿಚಾರವಾಗಿ ಜಗಳ ಆರಂಭವಾಗಿದೆ. ಈ ಸಂದರ್ಭವೂ ಮಗಳು ತಂದೆಯ ಪರವಹಿಸಿ ಮಾತನಾಡಿದ್ದು, ಇದರಿಂದಾಗಿ ಸುಧಾಗೆ ಇದನ್ನು ಸಹಿಸಲು ಸಾಧ್ಯವಾಗಿರಲಿಲ್ಲ.

ಅದೇ ದಿನ ರಾತ್ರಿ ವೀರಣ್ಣ ಮನೆಗೆ ಬಂದಾಗ ಪತ್ನಿ-ಮಗು ಇಲ್ಲದ್ದನ್ನು ಕಂಡು ಪತ್ನಿಗೆ ಕರೆ ಮಾಡಿದ್ದು, ಈ ವೇಳೆ ಪತ್ನಿಯು ತಾನು ಮಗುವನ್ನು ಗೋಬಿ ಮಂಚೂರಿ ಕೊಡಿಸಲು ಕರೆದುಕೊಂಡು ಬಂದೆ. ಆದರೆ, ಅವಳು ಈಗ ಕಾಣೆಯಾಗಿದ್ದಾಳೆ ಎಂದು ಹೇಳಿದ್ದಾಳೆ. ಇದಾದ ಬಳಿಕ ಇಬ್ಬರು ಕೂಡ ಪೊಲೀಸ್ ಠಾಣೆಗೆ ತೆರಳಿ ಮಗು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ.

ಬುಧವಾರ ಬೆಳಗ್ಗೆ ಈ ಮಗುವಿನ ಮೃತದೇಹ ಪತ್ತೆಯಾಗಿದ್ದು ದಂಪತಿಯನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭ ಸುಧಾ ಅನುಮಾನಾಸ್ಪದವಾಗಿ ವರ್ತಿಸಿದ್ದಾಳೆ. ಇನ್ನು ಅಲ್ಲಿನ ಸ್ಥಳೀಯರು ಹಾಗೂ ಗೋಬಿ ಮಂಚೂರಿ ಅಂಗಡಿಗೆ ಮಾಲೀಕನ ಬಳಿ ಕೇಳಿದಾಗ ಸುಧಾ ಮಗುವನ್ನು ಗೋಬಿ ಅಂಗಡಿಗೆ ಕರೆದುಕೊಂಡು ಬಂದಿಲ್ಲ ಎಂದು ತಿಳಿದು ಬಂದಿದೆ.

ಮನೆಯಲ್ಲಿ ತಪಾಸಣೆ ನಡೆಸಿದ ವೇಳೆ ಕೃತ್ಯಕ್ಕೆ ಬಳಸಿದ್ದ ವೇಲ್‌ ನಲ್ಲಿ ರಕ್ತ ಅಂಟಿಕೊಂಡಿರುವುದು ಪತ್ತೆಯಾಗಿದೆ. ಕೂಡಲೇ ತಾಯಿ ಸುಧಾಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಕೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ