ಸಾಹಿತಿಗಳಿಗೆ ಬೆದರಿಕೆ ಹಾಕುತ್ತಿದ್ದ ಆರೋಪಿಯ ಬಂಧನ ಸಂತಸ ತಂದಿದೆ: ಸಾಹಿತಿ ಕುಂ.ವೀರಭದ್ರಪ್ಪ
ಬೆಂಗಳೂರು: ಸಾಹಿತಿಗಳಿಗೆ ಬೆದರಿಕೆ ಪತ್ರ ಹಾಕುತ್ತಿದ್ದ ಆರೋಪಿ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿರುವ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ , ಸಾಹಿತಿಗಳಿಗೆ ಬೆದರಿಕೆ ಹಾಕುತ್ತಿದ್ದ ಆರೋಪಿಯ ಬಂಧನದ ವಿಚಾರ ತಿಳಿದು ಬಹಳ ಸಂತೋಷವಾಗಿದೆ. ಆತನನ್ನು ಬ್ರೈನ್ ವಾಷ್ ಮಾಡಿ ಆಯುಧವಾಗಿ ಸಿದ್ಧಮಾಡಿದ ವ್ಯವಸ್ಥೆ ಪ್ರಜಾಪ್ರಭುತ್ವದ ಲಕ್ಷಣವಲ್ಲ ಎಂದಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವೀರಭದ್ರಪ್ಪ,ಪತ್ರದಲ್ಲಿ ನಮ್ಮ ತಿಥಿ ದಿನಾಂಕ ಸೇರಿದಂತೆ, ಸಿಎಂಗೆ ಸಿದ್ದರಾಮಯ್ಯ ಅವರನ್ನು ಕಂಸನಿಗೆ ಹೋಲಿಸಿ ಪತ್ರ ಬರೆಯುತ್ತಿದ್ದ. ನಮ್ಮ ಭಾಷಣದ ಅಂಶಗಳನ್ನೇ ಇಟ್ಟುಕೊಂಡು ಪತ್ರ ಬರೆಯುತ್ತಿದ್ದ. ಒಮ್ಮೆ ಸಾವರ್ಕರ್ ಬಗ್ಗೆ ಭಾಷಣ ಮಾಡಿದ್ದಕ್ಕೆ ಪತ್ರ ಬರೆದು ಸಾವರ್ಕರ್ ಬಗೆಗಿನ ಪುಸ್ತಕಗಳನ್ನು ಕಳಿಸಿಕೊಟ್ಟಿದ್ದರು. ಸರ್ಕಾರ ಸಾಹಿತಿಗಳಿಗೆ ಸೂಕ್ತ ಭದ್ರತೆ ಒದಗಿಸಿ ಮನು ಪರಿಣಿತ ಸಂಘಟನೆಗಳನ್ನು ಮಟ್ಟ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಆರೋಪಿ ಪ್ರತಿ ಸಲ ಪತ್ರ ಬರೆಯುವಾಗ ನಾನು ಅದನ್ನ ಬೆದರಿಕೆ ಪತ್ರ ಎಂದುಕೊಳ್ಳುತ್ತಿರಲಿಲ್ಲ. ಬದಲಿಗೆ ಪ್ರೇಮ ಪತ್ರ ಎಂದು ತಿಳಿದುಕೊಳ್ಳುತ್ತಿದ್ದೆ. ಬೆದರಿಕೆ ಪತ್ರ ಬಂದಾಗ ನನ್ನ ಮನೆಯವರಿಗೆ ಹಾಗೂ ಪತ್ನಿಗೆ ಹೆಚ್ಚು ಆತಂಕವಾಗುತ್ತಿತ್ತು. ಹೊರಗಡೆ ಹೋಗದಂತೆ ಕುಟುಂಬ ಒತ್ತಡ ಹೇರುತ್ತಿತ್ತು. ಈಗ ಆರೋಪಿಯ ಬಂಧನವಾಗಿದೆ. ಆತನ ಬಗ್ಗೆ ನನಗೆ ಯಾವ ದ್ವೇಷವೂ ಇಲ್ಲ. ಸಾಹಿತಿಗಳು ಸಂವಿಧಾನದ ಪರವಾಗಿ ಮಾತನಾಡಬೇಕು. ಅದು ಸಾಹಿತಿಗಳ ಕೆಲಸ ಕೂಡ, ಅದಕ್ಕೆ ಬೆದರಿಕೆ ಹಾಕಿದರೆ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.?
ಬೆದರಿಕೆ ಪತ್ರ ಬರೆಯುತ್ತಿದ್ದ ಆರೋಪಿಯನ್ನು ಬಂಧಿಸಿರುವ ಸಿಸಿಬಿ ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.