ಹೇಮಾವತಿ ನದಿಗೆ ಮೀನಿನ ತ್ಯಾಜ್ಯ ಸುರಿಯುತ್ತಿರುವ ವ್ಯಾಪಾರಿಗಳು: ಸಾಂಕ್ರಾಮಿಕ ರೋಗದ ಭೀತಿ! - Mahanayaka

ಹೇಮಾವತಿ ನದಿಗೆ ಮೀನಿನ ತ್ಯಾಜ್ಯ ಸುರಿಯುತ್ತಿರುವ ವ್ಯಾಪಾರಿಗಳು: ಸಾಂಕ್ರಾಮಿಕ ರೋಗದ ಭೀತಿ!

hemavathi rievr
02/07/2024

ಚಿಕ್ಕಮಗಳೂರು: ಮೀನು ಮಾರಾಟಗಾರರು ಹಾಗೂ ಗೂಡ್ಸ್ ವಾಹನಗಳು ಹೇಮಾವತಿ ನದಿ ನೀರಿಗೆ ತ್ಯಾಜ್ಯಗಳನ್ನು ಸುರಿಯುತ್ತಿದ್ದು, ಇದರ ವಿರುದ್ಧ ಮೂಡಿಗೆರೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Provided by

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೇಮಾವತಿ ನದಿ ದಡದಲ್ಲಿ ಈ ಘಟನೆ ನಡೆದಿದೆ. ನದಿಗೆ ತ್ಯಾಜ್ಯಗಳನ್ನು ಸುರಿಯುತ್ತಿರುವುದರಿಂದಾಗಿ ಹೇಮಾವತಿ ನದಿ ನೀರಿಗೆ ಸಾಂಕ್ರಾಮಿಕ ರೋಗದ ಭೀತಿ ಸೃಷ್ಟಿಯಾಗಿದೆ.

ಮಂಗಳೂರಿನಿಂದ ಮಾರಾಟಕ್ಕೆಂದು ಮೀನು ತಂದು ಉಳಿದ ಮೀನನ್ನು ವ್ಯಾಪಾರಿಗಳು ನದಿಗೆ ಹಾಕುತ್ತಿದ್ದಾರೆ, ಅಲ್ಲದೇ ಕ್ಲೀನ್ ಮಾಡಿದ ಮೀನಿನ ವೇಸ್ಟನ್ನೂ ನದಿಗೆ ಹಾಕುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಣಕಲ್, ಹೇಮಾವತಿ ನದಿ ತಟದಲ್ಲಿ ರಾಶಿ–ರಾಶಿ ಮೀನಿನ ತ್ಯಾಜ್ಯಗಳು ಪತ್ತೆಯಾಗಿವೆ. ವ್ಯಾಪಾರದ ಬಳಿಕ ಮೀನಿನ ತ್ಯಾಜ್ಯ ತಂದು ಹೇಮಾವತಿ ನದಿಗೆ ಸುರಿದು ಗಾಡಿ ತೊಳೆದುಕೊಂಡು ಗೂಡ್ಸ್ ವಾಹನಗಳು ತೆರಳುತ್ತಿವೆ. ಹೀಗೆ ನಿತ್ಯ ಹೇಮಾವತಿ ನದಿ ದಡಕ್ಕೆ ಹತ್ತಾರು ವಾಹನಗಳು ಬಂದು ಹೋಗುತ್ತವೆ.

ಹೇಮಾವತಿ ನದಿ ನೀರು ಗೊರೂರು ಡ್ಯಾಂ ಸೇರಿ ಕೆ.ಆರ್.ಎಸ್. ಮೂಲಕ ಬೆಂಗಳೂರು ತಲುಪುತ್ತೆ, ಹಾಸನ ಜಿಲ್ಲೆಯ ಜೀವನಾಡಿಯೇ ಹೇಮಾವತಿ ನದಿಯಾಘಿದೆ. ಮೂಡಿಗೆರೆ ತಾಲೂಕಿನ ನೂರಾರು ಹಳ್ಳಿ, ಸಾವಿರಾರು ಎಕರೆ ಜಮೀನಿಗೆ ಇದೇ ನೀರು ಆಶ್ರಯವಾಗಿದೆ. ಈ ನೀರನ್ನ ಬಳಸಿದ್ರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಅನ್ನೋದು ಸ್ಥಳೀಯರ ವಾದವಾಗಿದೆ.

ಗೂಡ್ಸ್ ವಾಹನಗಳು, ಮೀನು ಮಾರಾಟಗಾರರ ಮೇಲೆ ಮೂಡಿಗೆರೆ ಜನರು ಕಿಡಿಕಾರುತ್ತಿದ್ದು, ನದಿಯನ್ನು ಕಲುಷಿತಗೊಳಿಸದಂತೆ ಗೂಡ್ಸ್ ವಾಹನಗಳ ಮಾಲೀಕರು, ಚಾಲಕರು ಹಾಗೂ ಮೀನು ಮಾರಾಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

ಇತ್ತೀಚಿನ ಸುದ್ದಿ