ಉಸ್ಸಪ್ಪಾ: ಶೃಂಗಸಭೆಗೆ ಬಂದ ಕೆನಡಾ ಪ್ರಧಾನಿ ದಿಲ್ಲಿಯಲ್ಲೇ ಬಾಕಿ: 36 ಗಂಟೆಗಳ ನಂತರ ತವರಿಗೆ ಹೋದ ಜಸ್ಟೀನ್: ಕಾರಣ ಏನ್ ಗೊತ್ತಾ..?
ಕೆನಡಾದ ಪ್ರಧಾನಿ ಜಸ್ಟೀನ್ ಟ್ರುಡೋ ಅವರು ಬರೋಬ್ಬರಿ 36 ಗಂಟೆಗಳ ನಂತರ ತಮ್ಮ ದೇಶಕ್ಕೆ ವಾಪಸ್ ತೆರಳಿದ್ದಾರೆ.
ಸೆಪ್ಟೆಂಬರ್ 8ರಂದು ಜಸ್ಟೀನ್ ಟ್ರುಡೋ G20 ಶೃಂಗಸಭೆಯ ಹಿನ್ನೆಲೆಯಲ್ಲಿ ಭಾರತ ಪ್ರವಾಸ ಕೈಗೊಂಡಿದ್ದರು. ನವದೆಹಲಿಯಲ್ಲಿ ಸೆ. 9, 10ರಂದು ನಡೆದ ಐತಿಹಾಸಿಕ ಶೃಂಗಸಭೆಯಲ್ಲಿ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ ಭಾಗಿಯಾಗಿದ್ದರು. ಶೃಂಗಸಭೆ ಮುಗಿಸಿ ಜಸ್ಟೀನ್ ಟ್ರುಡೋ ಕಳೆದ ಸೆಪ್ಟೆಂಬರ್ 10ರಂದೇ ಕೆನಡಾಕ್ಕೆ ತೆರಳಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ವಿಮಾನ ಕೈ ಕೊಟ್ಟಿದ್ದರಿಂದ ಪ್ರಯಾಣವನ್ನು ಮುಂದೂಡಿದ್ದರು.
ಸೆಪ್ಟೆಂಬರ್ 10 ರಂದು ಜಸ್ಟೀನ್ ಟ್ರುಡೋ ಕೆನಡಾದಿಂದ ಆಗಮಿಸಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಕೆನಡಾ ಪ್ರಧಾನಿ ದೆಹಲಿಯಲ್ಲಿ ಉಳಿದುಕೊಂಡಿದ್ದರು. ಇಂದು ಜಸ್ಟೀನ್ ಟ್ರುಡೋ ಅವರು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆನಡಾಕ್ಕೆ ತೆರಳಿದ್ದಾರೆ.
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಜಸ್ಟೀನ್ ಟ್ರುಡೋ ಅವರಿಗೆ ಬೀಳ್ಕೊಟ್ಟಿದ್ದಾರೆ. ವಿಮಾನದ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದ್ದು, ದೆಹಲಿಗೆ ಆಗಮಿಸಿದ್ದ ಕೆನಡಾ ನಿಯೋಗ ಸ್ವದೇಶಕ್ಕೆ ಮರಳಿದೆ.