ಪೊಲೀಸ್ ಅಧಿಕಾರಿಯನ್ನು ನಿಂದಿಸಿ, ಬೆದರಿಕೆ ಹಾಕಿದ ಬಿಜೆಪಿ ಯುವ ನಾಯಕ: ವಿಡಿಯೋ ವೈರಲ್ ಆದ ಬಳಿಕ ಕೇಸ್ ದಾಖಲು
ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯ ಬಿಜೆಪಿ ಯುವ ಘಟಕದ ನಾಯಕರಾಗಿದ್ದ ಅಮಿತ್ ಠಾಕೂರ್ ಅವರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಎಸ್ಐ) ಅವರನ್ನು ನಿಂದಿಸುವ ಮತ್ತು ಬೆದರಿಕೆ ಹಾಕುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅತ್ತ ಪಕ್ಷವು ಅವರನ್ನು ವಜಾಗೊಳಿಸಿದೆ.
ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಎರಡು ಗುಂಪುಗಳ ನಡುವೆ ಘರ್ಷಣೆ ಮತ್ತು ಗುಂಡಿನ ದಾಳಿ ನಡೆದ ಸ್ಥಳಕ್ಕೆ ಎಸ್ಐ ಹೋಗಿದ್ದರು. ಗಲಭೆ, ಅವಮಾನ, ಬೆದರಿಕೆ ಮತ್ತು ಸಾರ್ವಜನಿಕ ಸೇವಕನನ್ನು ನೋಯಿಸುವುದು ಸೇರಿದಂತೆ ಐಪಿಸಿಯ ವಿವಿಧ ವಿಭಾಗಗಳ ಅಡಿಯಲ್ಲಿ ಪೊಲೀಸರು ಠಾಕೂರ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
“ನಾವು ಅಮಿತ್ ಠಾಕೂರ್ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ. ಅವರ ಬಂಧನಕ್ಕಾಗಿ ವಿಶೇಷ ಕಾರ್ಯಾಚರಣೆಗಾಗಿ ತಂಡವನ್ನು ರಚಿಸಿದ್ದೇವೆ” ಎಂದು ಫಾರೂಕಾಬಾದ್ ಎಸ್ಪಿ ವಿಕಾಸ್ ಕುಮಾರ್ ಅವರು ಸುದ್ದಿ ಸಂಸ್ಥೆ ಐಎಎನ್ಎಸ್ಗೆ ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಸೆಕ್ಷನ್ 147 (ಗಲಭೆ), 504 (ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದ ಅವಮಾನ), 506 (ಕ್ರಿಮಿನಲ್ ಬೆದರಿಕೆ) ಮತ್ತು 332 (ಸಾರ್ವಜನಿಕ ಸೇವಕನನ್ನು ಕರ್ತವ್ಯದಿಂದ ತಡೆಯಲು ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು) ಸೇರಿವೆ ಎಂದು ಅವರು ಹೇಳಿದರು.
ಅಮೃತಪುರದ ಆಶಿಶ್ ಪ್ರತಾಪ್ ಸಿಂಗ್, ಕೊಟ್ವಾಲಿ ಪ್ರದೇಶದ ಮನು ಚತುರ್ವೇದಿ ಮತ್ತು ಅನ್ಶುಲ್ ಮಿಶ್ರಾ ಎಂಬ ಇತರ ಮೂವರು ಆರೋಪಿಗಳ ಕುರಿತು ಮಾಹಿತಿ ನೀಡಿದವರಿಗೆ ನಗದು ಬಹುಮಾನವನ್ನು ಪೊಲೀಸರು ಘೋಷಿಸಿದ್ದಾರೆ.