ಅಮೆರಿಕದಿಂದ ಗಡೀಪಾರು ಆದವರು ಅಮೃತಸರದಲ್ಲಿ ಲ್ಯಾಂಡಿಂಗ್: ಮೋದಿ ವಿರುದ್ಧ ಪಂಜಾಬ್ ಸಿಎಂ ಕಿಡಿ

ಅಮೆರಿಕದಿಂದ ಗಡೀಪಾರಿಗೊಳಗಾಗಿರುವ ಭಾರತೀಯರನ್ನು ಹೊತ್ತು ಬರುತ್ತಿರುವ ವಿಮಾನಗಳು ಬಂದಿಳಿಯಲು ಅಮೃತಸರವನ್ನು ಆಯ್ಕೆ ಮಾಡಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಟೀಕಿಸಿದ್ದಾರೆ.
“ಮೋದಿ ಹಾಗೂ ಟ್ರಂಪ್ ನಡುವೆ ಸಭೆ ನಡೆಯುವಾಗ, ನಮ್ಮ ಜನರಿಗೆ ಕೋಳ ತೊಡಿಸುವುದು. ಇದೇನಾ ಟ್ರಂಪ್ ನೀಡಿದ ಉಡುಗೊರೆ” ಎಂದೂ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಫೆಬ್ರವರಿ 15 ಹಾಗೂ 16ರಂದು ಮತ್ತೆರಡು ವಿಮಾನಗಳು ಅಮೃತಸರದಲ್ಲಿ ಬಂದಿಳಿಯಲಿದ್ದು, ಇದು ಪಂಜಾಬ್ ಹೆಸರಿಗೆ ಮಸಿ ಬಳಿಯಲು ಮಾಡುತ್ತಿರುವ ಉದ್ದೇಶಪೂರ್ವಕ ಪ್ರಯತ್ನವೇ ಎಂದು ನರೇಂದ್ರ ಮೋದಿಯನ್ನು ಅವರು ಪ್ರಶ್ನಿಸಿದ್ದಾರೆ. ಅಮೆರಿಕಕ್ಕೆ ಎರಡು ದಿನಗಳ ಭೇಟಿ ನೀಡಿರುವ ಪ್ರಧಾನಿ ಮೋದಿಗೆ ಇದು ಡೊನಾಲ್ಡ್ ಟ್ರಂಪ್ ನೀಡುವ ಉಡುಗೊರೆಯೆ ಎಂದೂ ಅವರು ವ್ಯಂಗ್ಯವಾಡಿದ್ದಾರೆ.
“ಅಮೆರಿಕಕ್ಕೆ ಅಕ್ರಮವಾಗಿ ವಲಸೆ ಹೋಗಿದ್ದ ಭಾರತೀಯ ಪ್ರಜೆಗಳನ್ನು ಕರೆ ತರುತ್ತಿರುವ ಎರಡನೆ ವಿಮಾನ ಅಮೃತಸರದಲ್ಲಿ ಬಂದಿಳಿಯಲಿದೆ. ಯಾವ ಮಾನದಂಡವನ್ನು ಆಧರಿಸಿ ಅಮೃತಸರವನ್ನು ಆಯ್ಕೆ ಮಾಡಲಾಗಿದೆ ಎಂಬ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಮಗೆ ತಿಳಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಫೆಬ್ರವರಿ 5ರಂದು ಅಮೃತಸರಕ್ಕೆ ಬಂದಿಳಿದ ಗಡೀಪಾರು ವಿಮಾನದಲ್ಲಿ ಬಹುತೇಕರು ಗುಜರಾತ್ ನವರಾಗಿದ್ದಾಗ, ವಿಮಾನವನ್ನೇಕೆ ಅಹಮದಾಬಾದ್ ಗೆ ಕಳಿಸಲಿಲ್ಲ? ಎಂದೂ ಮಾನ್ ಖಾರವಾಗಿ ಪ್ರಶ್ನಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj