ಚಿಕ್ಕಮಗಳೂರು: ಪ್ರವಾಸಿಗರ ಕಾರಿಗೆ ಡಿಕ್ಕಿ ಹೊಡೆದು “ನಾವು ಲೋಕಲ್, ಏನು ಮಾಡಕ್ಕಾಗಲ್ಲ?” ಎಂದ ಜೀಪು ಚಾಲಕ
ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ರಸ್ತೆಯಲ್ಲಿ ಬೆಂಗಳೂರಿನಿಂದ ಬಂದಿದ್ದ ಪ್ರವಾಸಿಗರ ಮೇಲೆ ಸ್ಥಳೀಯ ಬಾಡಿಗೆ ಜೀಪ್ ಚಾಲಕರ ದರ್ಪ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರವಾಸಿ ತಾಣವಾಗಿರುವ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ ಪೊಲೀಸರು ಅತಿರೇಕದ ವರ್ತನೆ ತೋರುವವರಿಗೆ ಖಡಕ್ ಎಚ್ಚರಿಕೆಯ ಸಂದೇಶ ನೀಡಿದ್ದರೂ, ಪುಂಡಾಟ ನಿಂತಿಲ್ಲ.
ಕುಡಿದ ಮತ್ತಿನಲ್ಲಿ ಜೀಪ್ ಚಲಾಯಿಸಿದ ಸ್ಥಳೀಯ ಬಾಡಿಗೆ ಜೀಪ್ ಚಾಲಕ ಬೆಂಗಳೂರಿನಿಂದ ಬಂದ ಪ್ರವಾಸಿಗರ ಕಾರಿಗೆ ಡಿಕ್ಕಿ ಹೊಡೆದಿದ್ದು, ಬಳಿಕ ತನ್ನದೇ ತಪ್ಪಿದ್ದರೂ ಅಶ್ಲೀಲ, ಅವಾಚ್ಯ ಶಬ್ದಗಳಿಂದ ಪ್ರವಾಸಿಗರನ್ನು ನಿಂದಿಸಿರುವ ಆರೋಪ ಕೇಳಿ ಬಂದಿದೆ.
ಕಾರಿಗೆ ಡಿಕ್ಕಿ ಹೊಡೆದಿದ್ದಲ್ಲದೇ ನಾವು ಲೋಕಲ್, ನಿನ್ನಿಂದ ಏನು ಮಾಡೋಕೆ ಆಗೋಲ್ಲ ಹೋಗು ಎಂದು ಕಾರು ಚಾಲಕನಿಗೆ ಆವಾಜ್ ಹಾಕಿರುವುದಾಗಿ ಆರೋಪ ಕೇಳಿ ಬಂದಿದೆ.
ಅಪಘಾತದ ರಭಸಕ್ಕೆ ಪ್ರವಾಸಿಗರ ಕಾರಿನ ಮುಂಭಾಗ ಜಖಂ ಆಗಿದೆ. ಸ್ಥಳೀಯ ಜೀಪು ಚಾಲಕರು ಪ್ರವಾಸಿಗರ ಜೊತೆಗೆ ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ವ್ಯಾಪಕ ಬೇಸರ ವ್ಯಕ್ತವಾಗಿದೆ. ಈ ರೀತಿಯ ಚಾಲಕರನ್ನು ಹತೋಟಿಗೆ ತರಲು ಪೊಲೀಸರು ಕಠಿಣ ಕ್ರಮಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296