ಕಾನೂನಿನ ಪಾಲಿಸುವವರಿಗೆ ನಾವು ತೊಂದರೆ ಕೊಡಲ್ಲ: ಎಸ್ಪಿ ಡಾ.ಅರುಣ್ - Mahanayaka

ಕಾನೂನಿನ ಪಾಲಿಸುವವರಿಗೆ ನಾವು ತೊಂದರೆ ಕೊಡಲ್ಲ: ಎಸ್ಪಿ ಡಾ.ಅರುಣ್

arun
23/09/2023

ಉಡುಪಿ: ಅಕ್ರಮ ಮರಳುಗಾರಿಕೆ, ಪರವಾನಿಗೆ ಇಲ್ಲದೆ ಕಲ್ಲು ಸಾಗಾಟ ಮಾಡುವ ವಾಹನಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದು, ಕಾನೂನು ಪಾಲನೆ ಮಾಡುವುದು ಪೊಲೀಸರ ಕರ್ತವ್ಯ. ಅದರಂತೆ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.

ಉಡುಪಿ ಎಸ್ಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿನ್ನೆಲೆಯಲ್ಲಿ ಮನೆ ಕಟ್ಟಲು ಬೇಕಾದ ಸಾಮಾಗ್ರಿಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡುವುದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗಳ ಕರ್ತವ್ಯವಾಗಿದೆ. ಈ ಪರ್ಯಾಯ ವ್ಯವಸ್ಥೆಗೆ ಜನರು ಕೂಡ ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ಕಟ್ಟಡ ನಿರ್ಮಾಣಕ್ಕೆ ಬೆಂಗಳೂರಿನಂತೆ ಎಂ ಸ್ಯಾಂಡ್ ಹಾಗೂ ಕಲ್ಲುಗಳನ್ನು ಬಳಸಬೇಕು.

ಕಾನೂನಿನ ಪ್ರಕಾರ ನಡೆದು ಕೊಳ್ಳುವ ಯಾರಿಗೂ ನಾವು ತೊಂದರೆ ಕೊಡುವುದಿಲ್ಲ ಎಂದರು.
ಜಿಲ್ಲೆಯಲ್ಲಿ ಸೈಬರ್ ಕ್ರೈಮ್ ಸಂಬಂಧ ಹಲವು ದೂರುಗಳು ಬಂದಿವೆ. ಆದುದರಿಂದ ಈ ಜಿಲ್ಲೆಯ ಸಾರ್ವಜನಿಕರು ಬಹಳ ಎಚ್ಚರಿಕೆಯಿಂದ ಇರಬೇಕು. ಶೇ.99ರಷ್ಟು ಆನ್‌ಲೈನ್ ವಂಚನೆ ಪ್ರಕರಣಗಳಲ್ಲಿ ವಂಚನೆಗೆ ಒಳಗಾಗುವವರೇ ಸ್ವಯಂ ಆಗಿ ಅಪರಿಚಿತ ಖಾತೆಗೆ ಹಣ ಹಾಕಿ ಮೋಸಕ್ಕೆ ಒಳಗಾಗುತ್ತಿದ್ದಾರೆ. ವಂಚನೆಗೆ ಒಳಗಾದ ಕೂಡಲೇ 1930ಗೆ ಕರೆ ಮಾಡಿದರೆ ತಮ್ಮ ಹಣವನ್ನು ವಾಪಾಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.


Provided by

ಒಂದು ತಿಂಗಳ ಹಿಂದೆ ಆಗುಂಬೆ ಸಮೀಪ ಬೈಕ್ ತಡೆದು ಜೋಡಿಯನ್ನು ಪ್ರಶ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಕಾಪು ಎಸ್ಸೈ ನೇತೃತ್ವದ ತಂಡ ಇಂದು ಸ್ಥಳಕ್ಕೆ ತೆರಳಿ ಆರೋಪಿಗಳ ಪತ್ತೆ ಹಾಗೂ ಸ್ಥಳ ಮಹಜರು ಕಾರ್ಯ ನಡೆಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಯಾರನ್ನು ಕೂಡ ಬಂಧಿಸಿಲ್ಲ. ಪ್ರಕರಣದ ತನಿಖೆಯನ್ನು ಮುಂದುವರೆಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು

ಇತ್ತೀಚಿನ ಸುದ್ದಿ