ಪಶ್ಚಿಮ ಬಂಗಾಳದ ರಾಜ್ಯಪಾಲರ ಮನೆಗೆ ನುಗ್ಗಿದ ಕಾರು: ವಿಧ್ವಂಸಕ ಕೃತ್ಯದ ಶಂಕೆ..?!
ದೆಹಲಿಯಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ಅವರ ನಿವಾಸಕ್ಕೆ ಕಾರೊಂದು ನುಗ್ಗಿದ ಘಟನೆ ನಡೆದಿದೆ. ಇದೇ ವೇಳೆ ವಿಧ್ವಂಸಕ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ ಎಂದು ರಾಜಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯಪಾಲರ ಮನೆಗೆ ಕಾರನ್ನು ನುಗ್ಗಿಸಿದ ಚಾಲಕನನ್ನು ಬಂಧಿಸಿ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ಧಾರೆ. ಘಟನೆಯಲ್ಲಿ ವಿಧ್ವಂಸಕ ಕೃತ್ಯದ ಶಂಕೆ ಇರುವ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಭದ್ರತೆಗೆ ರಾಜ್ಯಪಾಲರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿವಿ ಆನಂದ್ ಬೋಸ್ ಘಟನೆಗೂ ಒಂದು ದಿನದ ಹಿಂದೆ ಪಶ್ಚಿಮ ಬಂಗಾಳದ ಸಂದೇಶಖಾಲಿಗೆ ಭೇಟಿ ನೀಡಿ ಧರಣಿ ನಿರತ ಮಹಿಳೆಯರೊಂದಿಗೆ ಮಾತನಾಡಿದ್ದರು. ಇದಾದ ಬೆನ್ನಲ್ಲೇ ಮಂಗಳವಾರ ಸಂಜೆ ಈ ಘಟನೆ ನಡೆದಿದೆ.
ಟಿಎಂಸಿ ನಾಯಕ ಸಜಹಾನ್ ಶೇಖ್ ಮತ್ತು ಆತನ ಸಹಚರರು ತಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಮಹಿಳೆಯರು ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಸಂದೇಶಖಾಲಿಗೆ ಭೇಟಿ ನೀಡಿದ ಬಳಿಕ ರಾಜ್ಯಪಾಲರು ಸೋಮವಾರ ದೆಹಲಿಗೆ ತೆರಳಿದ್ದರು. ತನಿಖೆ ನಡೆಯುತ್ತಿದೆ.