ನಿಧಿ ಆಸೆ ತೋರಿಸಿದ ಜ್ಯೋತಿಷಿ: ಮನೆಯೊಳಗೆ 20 ಅಡಿ ಗುಂಡಿ ತೆಗೆದ ಮಹಿಳೆ!!

nedhi
22/08/2023

ಚಾಮರಾಜನಗರ: ಜ್ಯೋತಿಷಿ ತೋರಿದ್ದ ನಿಧಿಯಾಸೆಗೆ ಮಹಿಳೆಯೊಬ್ಬಳು ಕುಟುಂಬದೊಟ್ಟಿಗೆ ಸೇರಿ ಮನೆಯಲ್ಲಿ 20 ಅಡಿ ಗುಂಡಿ ತೆಗೆದ ಘಟನೆ ಹನೂರು ತಾಲೂಕಿನ ವಿ.ಎಸ್. ದೊಡ್ಡಿ ಗ್ರಾಮದಲ್ಲಿ ನಡೆದಿದೆ.

ವಿ.ಎಸ್.ದೊಡ್ಡಿ ಗ್ರಾಮದ ಭಾಗ್ಯ ಎಂಬವರ ಮನೆಯಲ್ಲಿ ಘಟನೆ ನಡೆದಿದ್ದು ನಿಧಿ ಆಸೆಗೆ ಗುಂಡಿ ತೋಡಿದ ಮಾಹಿತಿ ಬೇರೆಯವರಿಗೆ ತಿಳಿಯುತ್ತಿದ್ದಂತೆ ಮನೆಮಂದಿ ನಾಪತ್ತೆಯಾಗಿದ್ದಾರೆ.

ವಿ.ಎಸ್ ದೊಡ್ಡಿ ಗ್ರಾಮದ ಭಾಗ್ಯ ಎಂಬವರು ಕಳೆದ ನಾಲ್ಕೈದು ವರ್ಷದ ಹಿಂದೆ ವಾಸ್ತು ಸರಿಯಿಲ್ಲ ಎಂದು ತಿಳಿದು ಮನೆಯನ್ನು ತೊರೆದು ಬೆಂಗಳೂರಿನಲ್ಲಿ ತಳ್ಳುವ ಗಾಡಿಯಲ್ಲಿ ಮಜ್ಜಿಗೆ, ಜ್ಯೂಸ್ ವ್ಯಾಪಾರ ಮಾಡಿಕೊಂಡಿದ್ದರು.
ಈ ವೇಳೆ ಸಹೋದರಿಯ ಸಂಬಂಧಿಕ ಪರಶಿವ ಎಂಬವರು ಭಾಗ್ಯಳಿಗೆ ಸ್ಥಳೀಯ ಜೋತಿಷ್ಯರೊಬ್ಬರ ಬಳಿ ಕರೆದುಕೊಂಡು ಹೋಗಿ ಮನೆಯ ಬಗ್ಗೆ ಶಾಸ್ತ್ರ ಕೇಳಿಸಿದ್ದರಂತೆ.

ಮನೆಯಲ್ಲಿ ನಿಧಿ ಇರುವುದಾಗಿ ಜೋತಿಷಿ ತಿಳಿಸಿದಾಗ ನಿಧಿ ಶೋಧನೆಗಾಗಿ ಭಾಗ್ಯ ಅನುಮತಿ ನೀಡಿದ್ದರು ಎನ್ನಲಾಗಿದೆ.ಈ ಹಿನ್ನಲೆ ಜೋತಿಷಿ ತನ್ನ ಜತೆಗಾರನೊಂದಿಗೆ ಕಳೆದ ವಾರದ ಹಿಂದೆ ವಿ.ಎಸ್ ದೊಡ್ಡಿಗೆ ಆಗಮಿಸಿ ಭಾಗ್ಯ ಅವರ ಸಮ್ಮುಖದಲ್ಲೇ ರಾತ್ರಿ ವೇಳೆ ಮನೆಯಲ್ಲಿ ಕಳಸವಿಟ್ಟು ವಿಶೇಷ ಪೂಜೆಯನ್ನು ನೆರವೇರಿಸಿ ಯಾರಿಗೂ ತಿಳಿಯದಂತೆ ನಿಧಿಗಾಗಿ ಗುಂಡಿ ತೆಗೆಯುವ ಕಾರ್ಯವನ್ನು ಆರಂಭಿಸಿದ್ದರು. 3 ಅಡಿ ಅಗಲ ಹಾಗೂ 20 ಅಡಿ ಆಳವನ್ನು ತೆಗೆದಿದ್ದು, ಶೋಧ ಕಾರ್ಯ ಮುಂದುವರಿದಿತ್ತು. ಈ ಬಗ್ಗೆ ಸ್ಥಳೀಯರಿಗೆ ವಿಷಯ ಗೊತ್ತಾಗಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಪೊಲೀಸರಿಗೆ ಭಾಗ್ಯ ಸೇರಿದಂತೆ ಜ್ಯೋತಿಷಿ ಹಾಗೂ ಇನ್ನಿತರರು ಕಣ್ಮರೆಯಾಗಿದ್ದಾರೆ.
ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version